ನವದೆಹಲಿ: ತೀವ್ರ ನಿರ್ಣಾಯಕ ಎನಿಸಿರುವ 2024ರ ಲೋಕಸಭೆ ಚುನಾವಣೆ (Lok Sabha Election) ಗೆಲ್ಲಲು ವಿರೋಧ ಪಕ್ಷಗಳು ಪಣ ತೊಟ್ಟಿವೆ. ಬಿಜೆಪಿ (BJP) ನೇತೃತ್ವದ ಎನ್ಡಿಎ ಒಕ್ಕೂಟವನ್ನು ಈ ಬಾರಿಯ ಸೋಲಿಸಲು ತಂತ್ರ ರೂಪಿಸಲಾಗುತ್ತಿದ್ದು ಒಟ್ಟಾಗಿ ಹೋರಾಡಲು ಯೋಜನೆ ರೂಪಿಸುತ್ತಿವೆ. ಇದರ ಭಾಗವಾಗಿ ಚರ್ಚಿಸಲು ಇಂದು ಬಿಹಾರದ ಪಾಟ್ನಾದಲ್ಲಿ (Patna) ಸಭೆ ಕರೆಯಲಾಗಿದ್ದು ಬಿಜೆಪಿ ವಿರುದ್ಧದ ಬಹುತೇಕ ಎಲ್ಲ ವಿಪಕ್ಷಗಳು ಸಭೆಯಲ್ಲಿ ಭಾಗಿಯಾಗುತ್ತಿವೆ.
ಸಿಎಂ ನಿತೀಶ್ ಕುಮಾರ್ (Nitish kumar) ಸಭೆಯ ನೇತೃತ್ವ ವಹಿಸಿಕೊಂಡಿದ್ದು ಎಲ್ಲ ವಿಪಕ್ಷಗಳ ನಾಯಕರನ್ನು ಒಂದು ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂದಿನ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಎನ್ಸಿಪಿ ನಾಯಕ ಶರದ್ ಪವಾರ್, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗಿಯಾಗಲಿದ್ದಾರೆ.
ಈಗಾಗಲೇ ಪಾಟ್ನಾ ತಲುಪಿರುವ ಮಮತಾ ಬ್ಯಾನರ್ಜಿ(Mamata Banerjee), ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ವಿಪಕ್ಷಗಳ ಜೊತೆಗೆ ಕೈ ಜೋಡಿಸಲು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರತ್ಯೇಕ ಷರತ್ತುಗಳನ್ನು ಹಾಕಿದ್ದಾರೆ. ಕಾಂಗ್ರೆಸ್ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಜೊತೆಗಿನ ಮೈತ್ರಿ ಬಿಡಬೇಕು, ಪ್ರಬಲವಿರುವ ಪ್ರದೇಶಗಳಲ್ಲಿ ಮಾತ್ರ ಸ್ಪರ್ಧಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದನ್ನೂ ಓದಿ: 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ
ಇತ್ತ ದೆಹಲಿ ಆಡಳಿತ್ಮಾಕ ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದುವ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರದ ತಂದಿರುವ ಸುಗ್ರಿವಾಜ್ಞೆಗೆ ಕಾಂಗ್ರೆಸ್ ಬೆಂಬಲಿಸಿದರೆ ಮಾತ್ರ ಮಹಾಮೈತ್ರಿಗೆ ಕೈ ಜೋಡಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ತೆಲಂಗಾಣ ಸಿಎಂ ಭಾರತ್ ರಾಷ್ಟ್ರ ಸಮಿತಿ, ಆಂಧ್ರಪ್ರದೇಶದ ತೆಲಗು ದೇಶಂ ಪಾರ್ಟಿ ಹಾಗೂ ಒಡಿಶಾದ ಬಿಜೆಡಿ ಸಭೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿವೆ. ಬಿಆರ್ಎಸ್ ಗೆ ಕಾಂಗ್ರೆಸ್ ಪ್ರಬಲ ವಿರೋಧಿಯಾದರೆ, ಟಿಡಿಪಿ ಮತ್ತು ಬಿಜೆಡಿ ಅಂತರ ಕಾಯ್ದುಕೊಳ್ಳಲು ನಿರ್ಧಾರ ಮಾಡಿವೆ. ಇಂದು ನಡೆಯುವ ಸಭೆಯ ಫಲಿತಾಂಶದ ಜೊತೆಗೆ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಅನ್ನುವ ಬಗ್ಗೆ ಕುತೂಹಲ ಮನೆ ಮಾಡಿದೆ.