ಬೆಂಗಳೂರು: ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಆರೋಗ್ಯವಾಗಿದ್ದಾರೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ನಾನು ಚೆನ್ನಾಗಿದ್ದೇನೆ ಎನ್ನುವ ಸಂದೇಶವನ್ನು ದ್ವಾರಕೀಶ್ ರವಾನಿಸಿದ್ದಾರೆ.
ಕಳೆದೊಂದು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವಾರಕೀಶ್ ಇನ್ನಿಲ್ಲ ಎಂಬ ಸುಳ್ಳು ವದಂತಿ ಹಬ್ಬಿತ್ತು. ಇದನ್ನ ನೋಡಿದ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ತಿಳಿದ ದ್ವಾರಕೀಶ್ ಅವರು ಪ್ರತಿಕ್ರಿಯಿಸಿ, ಇದು ಸುಳ್ಳು ಸುದ್ದಿ, ನಾನು ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ. ನನಗೆ ಏನೂ ಆಗಿಲ್ಲ ಎಂದು ವಿಡಿಯೋ ಒಂದರ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ನಮಸ್ಕಾರ, ನಿಮ್ಮ ದ್ವಾರಕೀಶ್, ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೇನೆ. ಯಾವುದೇ ತರಹದ ಸುಳ್ಳು ವದಂತಿಯನ್ನು ನಂಬಬೇಡಿ. ಏನೇ ಆದರೂ ನಿಮಗೆ ಗೊತ್ತಾಗುತ್ತೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ. ಚೆನ್ನಾಗಿದ್ದೀನಿ, ಚೆನ್ನಾಗಿರುತ್ತೀನಿ ಎಲ್ಲಾ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವ ವಿಡಿಯೋವನ್ನು ಮಾಧ್ಯಮಗಳಿಗೆ ಕಳುಹಿಸಿ ಸುಳ್ಳು ವದಂತಿಗೆ ಪ್ರತಿಕ್ರಿಯಿಸಿದ್ದಾರೆ.