ಚಿಕ್ಕಬಳ್ಳಾಪುರ: ಮಹಿಳೆಯ ಮೃತದೇಹವನ್ನ ಸ್ಮಶಾನಕ್ಕೆ ಕೊಂಡ್ಯೊಯಲು ರಸ್ತೆಯಿಲ್ಲದೆ ಮೃತರ ಸಂಬಂಧಿಕರು ನಡು ರಸ್ತೆಯಲ್ಲೇ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಮನಕಲಕುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ರೊಪ್ಪಾರ್ಲಹಳ್ಳಿಯಲ್ಲಿ ನಡೆದಿದೆ.
ಗ್ರಾಮದ 35 ವರ್ಷದ ಉಮಾ ಎಂಬ ಮಹಿಳೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಹೀಗಾಗಿ ಸಂಬಂಧಿಕರು ಅಂತಿಮ ಕಾರ್ಯ ನಡೆಸಲು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ತೆರಳಿದ್ದರು. ಆದರೆ ಸ್ಮಶಾನಕ್ಕೆ ತೆರಳುವ ದಾರಿಯನ್ನೇ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಮಾಲೀಕ ರಘುನಾಥ್ ಒತ್ತುವರಿ ಮಾಡಿಕೊಂಡು ವರ್ಷಗಳಿಂದ ಇದ್ದ ರಸ್ತೆಗೆ ಮುಳ್ಳಿನ ತಂತಿಬೇಲಿ ನಿರ್ಮಿಸಿದ್ದ.
ಇದರಿಂದ ಹಲವು ಗಂಟೆಗಟ್ಟಲೇ ನಡುರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳಿಗೆ ಸಂಪರ್ಕ ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಗೆ ಮೃತಳ ಸಂಬಂಧಿಕರೇ ಮುಳ್ಳು ತಂತಿ ಬೇಲಿಯನ್ನು ಕಿತ್ತು ಹಾಕಿ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ ಉತ್ತಮವಾದ ರಸ್ತೆಯಿಲ್ಲದ ಪರಿಣಾಮ, ಕಲ್ಲುಮುಳ್ಳು-ಹಳ್ಳಗಳ ಹಾದಿಯಲ್ಲೇ ಹರಸಾಹಸ ಪಟ್ಟ ಸಂಬಂಧಿಕರು ಸ್ಮಶಾನಕ್ಕೆ ತೆರಳಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರು ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬರೆಹರಿಸುವುದಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv