ಚಿಕ್ಕೋಡಿ(ಬೆಳಗಾವಿ): ರಾಜರತ್ನ ಪುನೀತ್ ಸಾವನ್ನಪ್ಪಿ ಕೆಲ ತಿಂಗಳುಗಳು ಕಳೆದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಪುನೀತ್ ರಾಜ್ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯೋರ್ವ ತನ್ನ ವಿವಾಹದ ದಿನಂದಂದು ರಾಜರತ್ನನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವ ಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. ರಾಯಬಾಗ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು.
ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ವಿಶೇಷವೆಂದರೆ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ನವಜೀವನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ರಣ್ಬೀರ್ -ಆಲಿಯಾ ರಿಸೆಪ್ಷನ್ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?
ಹೌದು ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧು-ವರರು ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ. ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದ್ಗೆ ಆತನ ಸ್ನೇಹಿತರು ಪುನೀತ್ ಭಾವಚಿತ್ರ ಇರುವ ವಿವಿಧ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ್ ಪಟ್ಟಣ ಅವರ ಸ್ನೇಹಿತರು ಪುನೀತ್ ಹಾಡುಗಳನ್ನ ಹಾಡಿ ಮದುವೆಗೆ ಮತ್ತಷ್ಟು ಕಳೆ ತಂದರು.
ಮದುವೆ ನಂತರ ಪುನೀತ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಒಟ್ಟಿನಲ್ಲಿ ಪುನೀತ್ ಅಪ್ಪಟ ಅಭಿಮಾನಿ ಆನಂದ್ ಪಟ್ಟಣ ಅವರ ಮದುವೆ ಪುನೀತ್ ಮಯವಾಗಿತ್ತು. ಪುನೀತ್ ಎಲ್ಲೂ ಹೋಗಿಲ್ಲ ನಮ್ಮ ಮನದಲ್ಲಿಯೇ ಇದ್ದಾರೆ ಎಂಬುವುದಕ್ಕೆ ಈ ಮದುವೆ ಸಾಕ್ಷಿಯಾಗಿತ್ತು. ಇದನ್ನೂ ಓದಿ: ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್