ಬೆಂಗಳೂರು: ಮೂರು ವರ್ಷಗಳಿಂದ ರಾಜ್ಯವನ್ನು ಆಳಿದ ಸಿದ್ದರಾಮಯ್ಯ (Siddaramaiah) ಆಳ್ವಿಕೆ ಇನ್ನೇನ್ನೂ ಅಂತ್ಯ ಕಾಲಕ್ಕೆ ಬಂದು ನಿಂತಿದ್ದು, ಗುರುವಾರ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.
ದೆಹಲಿ ಹೈವೋಲ್ಟೇಜ್ ಸಭೆ ಬೆನ್ನಲ್ಲೇ ಸ್ಫೋಟಕ ಬೆಳವಣಿಗೆಗೆ ರಾಜ್ಯ ಕಾಂಗ್ರೆಸ್ ಸಾಕ್ಷಿಯಾಗಿದೆ. ಶುಕ್ರವಾರ (ಮೇ 29) ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆ ಸಾಧ್ಯತೆಯಿದ್ದು, ಈ ಸಭೆಯಲ್ಲಿ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಳ್ಳುವುದೊಂದೇ ಬಾಕಿ ಉಳಿದಿದೆ. ಇಂದು ರಾಜ್ಯಕ್ಕೆ ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಆಗಮಿಸಲಿದ್ದು, ನಾಳೆ ಶಾಸಕಾಂಗ ಪಕ್ಷದ ಸಭೆ ಖಚಿತವಾಗಿದೆ. ಶಾಸಕರಿಗೆ ಸಿದ್ದರಾಮಯ್ಯ ಎಕ್ಸಿಟ್ ಬಗ್ಗೆ ಮನವರಿಕೆ ಮಾಡುವ ಸಾಧ್ಯತೆಯಿದೆ. ಡಿಕೆ ಶಿವಕುಮಾರ್ (DK Shivakumar) ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕನಾಗಿ ಆಯ್ಕೆ ಮಾಡುವುದೂ ಫಿಕ್ಸ್ ಆಗಿದೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಫಿಕ್ಸ್
ದೆಹಲಿಗೆ ಹೋದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದಲೇ ಇಟ್ಟಿದ್ದಾರೆ. ಎಚ್ಚರಿಕೆ ಮತ್ತು ಚಾಣಾಕ್ಷ ನಡೆ ಪ್ರದರ್ಶಿಸಿದ ಡಿಕೆ ಶಿವಕುಮಾರ್, ಎಲ್ಲೂ ಸಹ ತಮ್ಮ ಭಾವನೆಗಳನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ. ಪ್ರಸ್ತುತ ಬೆಳವಣಿಗೆಯಿಂದ ತಮಗೆ ಸಂತೋಷ ಆಗಿದೆ. ಜಯ ಸಿಕ್ಕಿದೆ ಅಂತಾ ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ. ಮಾಧ್ಯಮಗಳ ಜೊತೆಗೂ ನಾಜೂಕಿನ ನಡೆ ಪ್ರದರ್ಶಿಸಿದ್ದು, ಮಾತಾಡದೇ ಮೌನದಿಂದಲೇ ಕುರ್ಚಿ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯಸಭೆ ಚುನಾವಣೆಗೂ ಮೊದಲೇ ಸಿಎಂ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ಇಟ್ಟಿದೆ. ಸಿಎಂ, ಡಿಸಿಎಂ ಇಬ್ಬರಿಗೂ ರಾಹುಲ್ ಗಾಂಧಿ ಈ ಬಗ್ಗೆ ಮೆಸೇಜ್ ಪಾಸ್ ಮಾಡಿದ್ದಾರೆ. ರಾಹುಲ್ ಮಾತು ಪಾಲಿಸಲು ಮುಂದಾದ ಸಿದ್ದರಾಮಯ್ಯ, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸೈ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯಸಭೆಗೆ ಸಿದ್ದರಾಮಯ್ಯರನ್ನು ಕರೆಸಿಕೊಳ್ಳುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ನಾಯಕರು ಇದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಬಿಗ್ ಆಫರ್ ನೀಡಿದ ಹೈಕಮಾಂಡ್ – ಮತ್ತಷ್ಟು ಕಾಲಾವಕಾಶ ಕೇಳಿದ ಸಿಎಂ
ಸಿಎಂ ಬದಲಾವಣೆ ಕಾರಣಗಳೇನು?
* 2023 ಚುನಾವಣೆ ಬಳಿಕ 2.5 ವರ್ಷದ ಒಪ್ಪಂದ
* ಕೊಟ್ಟ ಮಾತಿನಂತೆ ಬದಲಾವಣೆ ಎಂಬ ಸಂದೇಶ
* 2028 ಚುನಾವಣೆ ದೃಷ್ಟಿ ಇಟ್ಟುಕೊಂಡು ಬದಲಾವಣೆ
* ಡಿಕೆಶಿಗೆ ಅಧಿಕಾರ ಕೊಡದಿದ್ರೆ ಒಕ್ಕಲಿಗರ ಮುನಿಸು ಆತಂಕ
* ರಾಜ್ಯದಲ್ಲಿ ಬಂಡಾಯ ಚಟುವಟಿಕೆ ನಡೆಯುವ ಭೀತಿ
* ಪಕ್ಷ ನಂಬಿದವರನ್ನ ಕೈ ಬಿಡಲ್ಲ ಎಂಬ ಸಂದೇಶದ ಉದ್ದೇಶ
* ಡಿಕೆಶಿ ಪಕ್ಷ, ಗಾಂಧಿ ಕುಟುಂಬ ಪರ ನಿಂತಿದ್ದಕ್ಕೆ ಜೈಲಿಗೆ ಹೋಗಿದ್ರು
* ಅಧಿಕಾರ ಕೊಡದೇ ಹೋದ್ರೆ ಡಿಕೆಶಿಗೆ ಮೋಸ ಮಾಡಿದ ಹಣೆಪಟ್ಟಿ
* ಡಿಕೆಶಿಗೆ ಅಧಿಕಾರ ಕೊಡದಿದ್ರೆ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ
* ಡಿಕೆಶಿಗೆ ಪಟ್ಟ ಕಟ್ಟದಿದ್ರೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಆತಂಕ
ಇಷ್ಟೆಲ್ಲ ಲೆಕ್ಕಾಚಾರಗಳನ್ನು ಹಾಕಿಕೊಂಡು ಹೈಕಮಾಂಡ್ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನು, ನಾಯಕತ್ವ ಬದಲಾವಣೆಯೇನೋ ಫಿಕ್ಸ್ ಆಗಿದೆ. ಆದರೆ, ಇದರಿಂದ ಎದುರಾಗುವ ಡ್ಯಾಮೇಜ್ ಕಂಟ್ರೋಲ್ಗೂ ದೆಹಲಿ ನಾಯಕರು ಪ್ಲಾನ್ ಮಾಡಿದ್ದಾರೆ.
ನಾಯಕತ್ವ ಬದಲಾವಣೆ ನಂತರ ಮುಂದೇನು?
* ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ ಸಮಾಧಾನಕ್ಕೆ ಕ್ರಮ
* ದೆಹಲಿ ಅಂಗಳದಲ್ಲಿ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಡುವುದು
* ಯತೀಂದ್ರ ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಕೊಡುವುದು
* ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು
* ಹೊಸ ಸಂಪುಟದಲ್ಲಿ ಸಿದ್ದರಾಮಯ್ಯ ಹೇಳಿದವರಿಗೆ ಸಚಿವ ಸ್ಥಾನ
* ಸಿದ್ದರಾಮಯ್ಯ ಬೆಂಬಲಿಗರಿಗೆ ಪ್ರಮುಖ ಹುದ್ದೆಗಳು, ಜವಾಬ್ದಾರಿ
ಗುರುವಾರ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ರೆ, ಮರುದಿನ ಅಂದ್ರೆ ಶುಕ್ರವಾರ ಡಿಕೆ ಶಿವಕುಮಾರ್ಗೆ ಪಟ್ಟಾಭಿಷೇಕಕ್ಕೆ ಮುಹೂರ್ತ ಸಜ್ಜಾಗಿದೆ. ಇದೆಲ್ಲದರ ಬಗ್ಗೆ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯರಕು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ. ಇದನ್ನೂ ಓದಿ: ಫೈನಲ್ ಫೈಟ್| 6 ಗಂಟೆಗಳ ಮ್ಯಾರಾಥಾನ್ ಸಭೆ – ಸಿಎಂ, ಡಿಸಿಎಂಗೆ ಹೈಕಮಾಂಡ್ ಸಂದೇಶ ಏನು?
