ಬೆಂಗಳೂರು: ಕೆಲಸಗಾರರಿಗೆ ಸಂಬಳ ನೀಡಲು ಮನೆಯಲ್ಲಿ ಇಟ್ಟಿದ್ದ 25 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ನೇಪಾಳಕ್ಕೆ ಎಸ್ಕೇಪ್ ಆಗಲು ಯತ್ನಿಸಿದ್ದ ನೇಪಾಳಿ ಮೂಲದ ದಂಪತಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 25 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ನೇಪಾಳ ಮೂಲದ ಪವನ್ ಬಿಸ್ತಾ ಹಾಗೂ ಸೀತಾ ಬಿಸ್ತಾ ಬಂಧಿತ ಆರೋಪಿಗಳು. ಅಮೃತಹಳ್ಳಿಯ ಕಾಂಟ್ರಾಕ್ಟರ್ ಒಬ್ಬರ ಮನೆಯಲ್ಲಿ ಮನೆ ಕೆಲಸಕ್ಕೆ ಸೇರಿದ್ದ ದಂಪತಿ, ಕೇವಲ ಒಂದು ತಿಂಗಳಲ್ಲೇ ಮನೆಯ ಮಾಲೀಕರು ಹಣ ಎಲ್ಲಿ ಇಡುತ್ತಾರೆ ಎಂಬ ಮಾಹಿತಿ ಕಲೆ ಹಾಕಿದ್ದರು. ಕಳ್ಳತನ ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಐಸ್ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ಮಗುವಿಗೆ ಒದ್ದು, ಉಸಿರುಗಟ್ಟಿಸಿ ಕೊಲೆ: ಪೊಲೀಸರ ಬಳಿ ಸತ್ಯ ಬಿಚ್ಚಿಟ್ಟ ಆರೋಪಿ ಮೋಹನ್
ಉದ್ಯಮಿ ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್ನಿಂದ 25 ಲಕ್ಷ ರೂಪಾಯಿ ಡ್ರಾ ಮಾಡಿ ಮನೆಯ ಕಬೋರ್ಡ್ನಲ್ಲಿ ಇಟ್ಟಿದ್ದರು. ಕಬೋರ್ಡ್ನ ಕೀಲಿಯನ್ನು ಮತ್ತೊಂದು ಕಬೋರ್ಡ್ನಲ್ಲಿ ಇಟ್ಟಿರುವ ವಿಚಾರವೂ ಆರೋಪಿಗಳಿಗೆ ಗೊತ್ತಾಗಿತ್ತು. ಮನೆಯ ಮಾಲೀಕರು ಇಲ್ಲದ ಸಮಯದಲ್ಲಿ ಕಬೋರ್ಡ್ ತೆರೆದು 25 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ದಂಪತಿ ಪರಾರಿಯಾಗಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನೆಲಮಂಗಲ ತಾಲೂಕಿನಲ್ಲಿ ಚಿರತೆ ಹಾವಳಿ; ಜನರಲ್ಲಿ ಆತಂಕ

