ಬಾಗಲಕೋಟೆ: 2017ರಲ್ಲಿ ಐಟಿ ದಾಳಿಯಾದಾಗ ಕಾಂಗ್ರೆಸ್ ಸರ್ಕಾರವೇ ಇತ್ತು. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಹೀಗಾಗಿ ಡಿಕೆಶಿ ಮೇಲೆ ಕೇಸ್ ಹಾಕಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ಸಂಶಯ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2017ರಲ್ಲಿ ಅವರ ಮನೆಯಲ್ಲಿ ಐಟಿ ದಾಳಿ ಮಾಡಿದೆ. ಐಟಿ ಸಿಸ್ಟಮ್, ಇಡಿಯವರು ದಾಖಲೆಗಳನ್ನು ನೋಡಿಕೊಂಡು ಕೇಸ್ ದಾಖಲು ಮಾಡುತ್ತಾರೆ. ಅದೇ ರೀತಿ ಕೇಸ್ ದಾಖಲು ಮಾಡಿ ಡಿಕೆಶಿಯನ್ನು ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ. ರಾಜಕೀಯ ದ್ವೇಷ ಮಾಡುವುದೇ ಆಗಿದ್ದರೆ ಚುನಾವಣೆ ಮುಂಚೆಯೇ ಮಾಡಬಹುದಿತ್ತು. ಚುನಾವಣೆ ಮುಂಚೆಯೇ ಅವರನ್ನು ಒಳಗೆ ಹಾಕಬಹುದಿತ್ತು ಎಂದರು.
ಕಾಂಗ್ರೆಸ್ಸಿನವರಿಗೆ ಈಗ ಮುಖ ಉಳಿಸಿಕೊಳ್ಳಬೇಕಾಗಿದೆ. ಡಿಕೆಶಿ ಭ್ರಷ್ಟಾಚಾರ ಆರೋಪದಲ್ಲಿ ಒಳಗೆ ಹೋಗಿದ್ದಾರೆ. ಅವರನ್ನು ಕರ್ನಾಟಕ ಸರ್ಕಾರ ಅಥವಾ ಯಾವುದೇ ಲೋಕಾಯುಕ್ತ ಅಧಿಕಾರಿಗಳೂ ಒಳಗೆ ಹಾಕಿಲ್ಲ. 2017 ರಲ್ಲಿ ಐಟಿ ದಾಳಿಯಾದಾಗ ಕಾಂಗ್ರೆಸ್ ಸರ್ಕಾರವೇ ಇತ್ತು. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಸಿದ್ದರಾಮಯ್ಯ ನಿಲ್ಲಿಸಬಹುದಿತ್ತಲ್ಲ, ಯಾಕೆ ನಿಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು. ಹೀಗಾಗಿ ದ್ವೇಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಸೇರಿಕೊಂಡಿದ್ದಾರೆ. ಆದ್ದರಿಂದ ಡಿಕೆಶಿ ಮೇಲೆ ಕೇಸ್ ಹಾಕುವುದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಸಂಶಯ ನನಗಿದೆ. ಡಿಕೆಶಿ ಬೆಳೆಯುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನೆರೆ ಬಂದ ಹಿನ್ನೆಲೆಯಲ್ಲಿ ಸಿಎಂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಯಾವ ಸಿಎಂ ಕೂಡ ಈ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲಿಲ್ಲ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ನೀಡುತ್ತಿದೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಹಿಂದಿನ ಸರ್ಕಾರದಲ್ಲಿ ಮನೆ ಕಟ್ಟಿಸಿಕೊಳ್ಳಲು ಕೇವಲ 92 ಸಾವಿರ ಕೊಟ್ಟಿದೆ. ನಾವು ಮನೆ ಬಿದ್ದವರಿಗೆ ಐದು ಲಕ್ಷ ಘೋಷಣೆ ಮಾಡಿದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.