ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಓರ್ವ ಸೋಮಾರಿ, ಇಂತಹ ಲೋಕಸಭಾ ಸದಸ್ಯರನ್ನು ನಾನು ನೋಡಿಲ್ಲ ಎಂದು ಮಾಜಿ ಅರಣ್ಯ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದಾಗಿ ನಳಿನ್ ಕುಮಾರ್ ಹೇಳುತ್ತಿದ್ದಾರೆ. ಸದಾ ಸಕ್ರ್ಯೂಟ್ ಹೌಸ್ನಲ್ಲಿಯೇ ಇರುವ ಅವರು ಹೇಗೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ. ಅಲ್ಲದೇ ಅವರಿಗೆ ಡಾಲರ್ ಎಂದರೇ ಏನು ಅಂತಾನೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಳಿನ್ ಅವರಿಗೆ ಕೆಲಸ ಮಾಡುವ ವಿಧಾನವೇ ಗೊತ್ತಿಲ್ಲ. ಹೀಗಾಗಿ ಕೋಮು ಪ್ರಚೋದನೆ ಭಾಷಣ ಮಾಡುವುದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಅದಕ್ಕೆ ಮತ್ತಷ್ಟು ಎಣ್ಣೆ ಸುರಿದು ಗಲಾಟೆ ಮಾಡಿಸುವುದು ಮಾತ್ರ ಅವರಿಗೆ ಗೊತ್ತಿದೆ ಎಂದು ಅವರು ಕುಟುಕಿದರು.
ಫಲ್ಗುಣಿ ಸೇತುವೆ ಕುಸಿದಿರುವ ಕುರಿತು ಮಾತನಾಡಿದ ರಮಾನಾಥ ರೈ ಅವರು, ಕೇವಲ ಎರಡು ವರ್ಷ ಮರಳುಗಾರಿಕೆಯಿಂದ ಸೇತುವೆ ಬೀಳುವುದಿಲ್ಲ. ಕಳೆದ 15 ವರ್ಷಕ್ಕೂ ಮೊದಲೇ ಸೇತುವೆ ಕೆಳಗೆ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಒಂದೇ ಪಕ್ಷದವರೇ ಮರಳುಗಾರಿಕೆ ಮಾಡುತ್ತಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು. ಎಲ್ಲ ನಾಯಕರು ಇದರಲ್ಲಿ ಭಾಗಿಯಾಗಿರುತ್ತಾರೆ ಎಂದು ಆರೋಪಿಸಿದರು.
ನಾನು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ, ತಾವು ಟಿಕೆಟ್ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದರು.
2015ರಲ್ಲಿ ಉಳ್ಳಾಲ ಬಳಿಯ ಕಿನ್ಯಾ ಗ್ರಾಮದಲ್ಲಿ ನಡೆದ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್, ಸಂಸದರ ಅನುದಾನ ಬಳಕೆಯಲ್ಲಿ ದಕ್ಷಿಣ ಕನ್ನಡದ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದ್ದರು.