ಧಾರವಾಡ: ಇಲ್ಲಿನ ಓಂನಗರದಲ್ಲಿ ಇತ್ತೀಚೆಗಷ್ಟೇ ನಿವೃತ್ತ ಶಿಕ್ಷಕಿಯೊಬ್ಬರು (Teacher) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಪೊಲೀಸರು (Police) ಭೇದಿಸಿದ್ದಾರೆ.
ಗಿರಿಜಾ ನಡೂರಮಠ (63) ಎಂಬ ನಿವೃತ್ತ ಶಿಕ್ಷಕಿಯ ಶವ ಕೊಳೆತ ಸ್ಥಿತಿಯಲ್ಲಿ ಡಿ.15 ರಂದು ಅವರ ಮನೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಸಹಜ ಸಾವು ಅಥವಾ ಆತ್ಮಹತ್ಯೆ ಇರಬಹುದು ಎಂದು ಎಲ್ಲರೂ ಊಹಿಸಿದ್ದರು. ಇದೀಗ ವಿದ್ಯಾಗಿರಿ ಠಾಣೆಯ ಪೊಲೀಸರು ಇದು ಕೊಲೆ ಎಂದು ಸಾಬೀತುಪಡಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್ಮೆಂಟ್ನ 33ನೇ ಫ್ಲೋರ್ನಿಂದ ಬಿದ್ದು ಟೆಕ್ಕಿ ದುರ್ಮರಣ
ಗಿರಿಜಾ ಅವರೊಂದಿಗೆ ಅಮರಗೋಳದ ಮಂಜುನಾಥ ದಂಡಿನ ಎಂಬಾತ ಹಣದ ವ್ಯವಹಾರ ಇಟ್ಟುಕೊಂಡಿದ್ದ. ಅವರಿಗೆ ಸುಮಾರು 10 ಲಕ್ಷ ರೂ. ಹಣ ಕೊಡಬೇಕಾಗಿತ್ತು. ಇದೇ ಕಾರಣಕ್ಕೆ ಗಿರಿಜಾ ಅವರನ್ನು ಆತ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿ ಮಂಜುನಾಥ್ ವೇಲ್ನಿಂದ ಶಿಕ್ಷಕಿಯ ಕತ್ತು ಬಿಗಿದು ಕೊಲೆಗೈದಿದ್ದಾನೆ. ಆದರೆ ಕೊಲೆ ಎಂದು ಯಾವುದೇ ಗುರುತು ಆರಂಭದಲ್ಲಿ ಗೊತ್ತಾಗಿರಲಿಲ್ಲ. ದೇಹವನ್ನು ಪರೀಕ್ಷಿಸಿದಾಗ ಕುತ್ತಿಗೆಯ ಭಾಗದಲ್ಲಿ ಸಣ್ಣ ಕಲೆ ಕಂಡಿದ್ದು ಇದನ್ನೇ ಇಟ್ಟುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿ ಟೀ ಅಂಗಡಿಗೆ ಟ್ರಕ್ ನುಗ್ಗಿಸಿದ ಚಾಲಕ- ಐವರ ದುರ್ಮರಣ