ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಯಾರು ಆಚರಣೆ ಮಾಡಬೇಕು ಎಂಬ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು ಶಾಸಕ ಜಮೀರ್ಗೂ ಧ್ವಜ ಹಾರಿಸಲು ನಿರ್ಬಂಧ ವಿಧಿಸಲಾಗಿದೆ.
ಕಂದಾಯ ಇಲಾಖೆ ವತಿಯಿಂದಲೇ ಧ್ವಜಾರೋಹಣ ನೆರವೇರಿಸಲು ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಉನ್ನತಮಟ್ಟದ ಸಭೆ ನಡೆಸಿದ ಸಚಿವ ಅಶೋಕ್, ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಸಕ ಜಮೀರ್ ಅವರಿಗಾಗಲಿ, ಮುಸ್ಲಿಂ ಸಂಘಟನೆಗಳಿಗಾಗಲಿ, ಹಿಂದೂ ಪರ ಸಂಘಟನೆಗಳಿಗಾಗಲಿ ಅಥವಾ ಚಾಮರಾಜಪೇಟೆ ನಾಗರೀಕರ ಒಕ್ಕೂಟಕ್ಕೆ ಆಗಲಿ ಧ್ವಜಾರೋಹಣ ಮಾಡಲು ಅವಕಾಶ ಇರುವುದಿಲ್ಲ. ಜೊತೆಗೆ ಯಾರಿಗೂ ಪ್ರತ್ಯೇಕವಾಗಿ ಆಹ್ವಾನ ನೀಡುವುದಿಲ್ಲ. ಯಾರೇ ಆಗಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ಧಾರ್ಮಿಕ ಘೋಷಣೆಗಳನ್ನು ಕೂಗುವಂತಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ
ಸದ್ಯ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ. ಈ ಮೈದಾನದ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದನ್ವಯ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಡೆಗೆ ನಾಗರೀಕರ ಒಕ್ಕೂಟ ಅಸಮಾಧಾನ ಹೊರ ಹಾಕಿದೆ. ಯಾರನ್ನು ಕರೆಯಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದೆ.
ಶಾಸಕ ಜಮೀರ್ ಕೈಯಲ್ಲಿ ಧ್ವಜಾರೋಹಣ ಮಾಡಿಸಬಾರದು ಎಂದು ಒತ್ತಾಯಿಸಿದೆ. ಈ ಮಧ್ಯೆ ಜಮೀರ್ ಹೇಳಿಕೆಗೆ ಬೆಲೆ ಇಲ್ಲ. ಯಾರು ಏನೇ ಹೇಳಿದ್ರೂ ಕಾನೂನು ಪ್ರಕಾರ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.