ಬೆಂಗಳೂರು: ಸ್ವಾತಂತ್ರ್ಯ ದಿನದಂದು ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯ ವತಿಯಿಂದಲೇ ಧ್ವಜಾರೋಹಣ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಜಟಾಪಟಿಗೆ ಸರ್ಕಾರ ಕೊನೆ ಹಾಡಿದೆ.
ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಗಣೇಶೋತ್ಸವಕ್ಕೆ ವಿವಿಧ ಸಂಘಟನೆಗಳ ಮನವಿ ವಿಚಾರ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ ಮಾಡಲಾಗುತ್ತದೆ. ಶಾಸಕ ಜಮೀರ್ ಸೇರಿದಂತೆ ಯಾವುದೇ ಸಂಘಟನೆಗಳಿಗೆ ಧ್ವಜ ಹಾರಿಸಲು ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಧ್ವಜಾರೋಹಣ ಮಾಡುತ್ತಾರೆ ಎಂದು ತಿಳಿಸಿದರು.
ಶಿಷ್ಟಾಚಾರದ ಪ್ರಕಾರ ಆ ಭಾಗದ ಸಂಸದ, ಶಾಸಕರು ಭಾಗವಹಿಸಬಹುದು. ಭಾರತ್ ಮಾತಾಕೀ ಜೈ, ವಂದೇ ಮಾತರಂ ಬಿಟ್ಟರೆ ಬೇರೆ ಯಾವುದೇ ಘೋಷಣೆ ಕೂಗುವಂತಿಲ್ಲ. ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಬಹುದು ಎಂದು ಹೇಳಿದರು. ಇದರ ಜೊತೆ ಈ ಹಿಂದೆ ಈ ಆಸ್ತಿಯ ಕುರಿತಂತೆ ನ್ಯಾಯಾಲಯದಲ್ಲಿ ನಡೆದ ಹೋರಾಟದ ಬಗ್ಗೆ ಮಾಹಿತಿ ನೀಡಿದರು.
ಹಿಂದೂ ಸಂಘಟನೆಗಳು ಗಣೇಶೋತ್ಸವ ಆಚರಣೆಗೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್, ಗಣೇಶೋತ್ಸವಕ್ಕೆ ಇನ್ನೂ ಸಮಯ ಇದೆ. ಆಗ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್
ಕಂದಾಯ ಇಲಾಖೆಯ ಆಸ್ತಿ ಹೇಗೆ?
ಸರ್ವೇ ನಂಬರ್ 40, ಗುಟ್ಟಹಳ್ಳಿ 10 ಎಕರೆ 5 ಗುಂಟೆಯಲ್ಲಿ ಈಗ 2 ಎಕರೆ 5 ಗುಂಟೆ ಉಳಿದಿದೆ. ಲೇಔಟ್ ಮಾಡುವಾಗ ಉಳಿದ ಜಮೀನು ಬಳಸಿಕೊಳ್ಳಲಾಗಿದೆ. 1952ರಲ್ಲಿ ಸರ್ಕಾರ ಇಲ್ಲಿ ಶಾಲೆ ಕಟ್ಟಲು ಪ್ರಸ್ತಾವನೆ ಮಂಡಿಸಿತ್ತು. ಆ ಸಂದರ್ಭದಲ್ಲಿ ಅಬ್ದುಲ್ ವಾಜೀದ್ ಎಂಬವರು ಮುನ್ಸಿಪ್ ಕೋರ್ಟ್ಗೆ ಹೋಗುತ್ತಾರೆ. ನಾವು ಪ್ರಾರ್ಥನೆ ಮಾಡುತ್ತಿದ್ದೇವೆ. ಈ ಜಾಗದಲ್ಲಿ ಶಾಲೆ ಕಟ್ಟಬಾರದು ಎಂದು ತಡೆ ನೀಡುವಂತೆ ಮನವಿ ಮಾಡುತ್ತಾರೆ.
1956ರಲ್ಲಿ ಈ ಅರ್ಜಿ ವಜಾವಾಗುತ್ತದೆ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತಾರೆ. 1974ರಲ್ಲಿ ಸಿಟಿ ಸರ್ವೇಯಲ್ಲಿ 1235 ಸರ್ವೇ ನಂಬರ್ ಆಟದ ಮೈದಾನ, 1236 ಸರ್ವೇ ನಂಬರ್ ಹಾಲಿನ ಬೂತ್ ಎಂದು ನಮೂದು ಮಾಡಿದೆ. 1976ರಲ್ಲಿ ಅನುಭೋಗದ ಹಕ್ಕನ್ನು ಆಟದ ಮೈದಾನ, ಆಸ್ತಿ ಹಕ್ಕು ಪಾಲಿಕೆಗೆ ಸೇರಿಸಲಾಗಿದೆ. ಇದನ್ನು ಪ್ರಶ್ನಿಸಿ ಅವರು ಮತ್ತೆ ಸಿವಿಲ್ ಕೋರ್ಟ್ಗೆ ಹೋಗುತ್ತಾರೆ. ಪ್ರಾರ್ಥನೆಗೆ ತೊಂದರೆ ಆಗಬಾರದು, ಸ್ಕೂಲ್ ಕಟ್ಟಬಾರದು ಎಂದು ಕೋರ್ಟ್ ತಡೆಯಾಜ್ಞೆ ನೀಡುತ್ತದೆ.
1964ರಲ್ಲಿ ಪಾಲಿಕೆ ಸುಪ್ರೀಂಕೋರ್ಟ್ಗೆ ಹೋಗುತ್ತದೆ. ಆಗ ಸುಪ್ರೀಂಕೋರ್ಟ್ ಸಿವಿಲ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಪ್ರಾರ್ಥನೆಗೆ ಅವಕಾಶ ಕೊಡಬೇಕು. ಶಾಲೆಗೆ ಕೊಡಬಾರದು ಎಂದು ಆದೇಶ ನೀಡುತ್ತದೆ. ಈ ಆಸ್ತಿ ಹಕ್ಕನ್ನು ಪ್ರಶ್ನೆ ಮಾಡಿ ಯಾರೂ ಕೋರ್ಟ್ಗೆ ಹೋಗಿಲ್ಲ. ಬಿಬಿಎಂಪಿ ಕಾಯ್ದೆ ಕಲಂ 149 ರಂತೆ ವಕ್ಫ್ ಬೋರ್ಡ್ ಸಲ್ಲಿಸಿದ ಆಸ್ತಿ ಹಕ್ಕು ಅರ್ಜಿಯನ್ನು ವಜಾಗೊಳಿಸಿದೆ. ಇದು ಕಂದಾಯ ಇಲಾಖೆ ಆಸ್ತಿ ಎಂದು ಆದೇಶ ಮಾಡಲಾಗಿದೆ. ಕೋರ್ಟ್ ಈ ಆಸ್ತಿಯ ಹಕ್ಕನ್ನು ಯಾರಿಗೂ ನೀಡದ ಕಾರಣ ಆಸ್ತಿ ಕಂದಾಯ ಇಲಾಖೆಗೆ ಸೇರಿದೆ.