ಚಿತ್ರದುರ್ಗ: ಕೊರೊನಾ ಹರಡದಂತೆ ಆಗಿರುವ ಭಾರತ ಲಾಕ್ ಡೌನ್ ನಿಂದಾಗಿ ವಿವಿಧ ಕಡೆಗಳಲ್ಲಿ ಜನರು ಆಹಾರವಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ಅವರ ಬಗ್ಗೆ ಕಾಳಜಿ ವಹಿಸಿ ಎಂದು ಜನ ಪ್ರತಿನಿಧಿಗಳಿಗೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರು ಚಾಲೆಂಜನ್ನು ಹಾಕಿದ್ದರು. ಆ ಚಾಲೆಂಜನ್ನು ಇದೀಗ ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸ್ವೀಕರಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಉತ್ತರ ಭಾರತದಿಂದ ಬಂದಿರುವ ನೂರಾರು ವಲಸಿಗ ಕುಟುಂಬಗಳಿಗೆ ಶಾಸಕ ತಿಪ್ಪಾರೆಡ್ಡಿ ಆಹಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ಜನರ ಸಹಾಯಕ್ಕಾಗಿ ಹೆದ್ದಾರಿಯ್ಲಲಿ ವಾರ್ರೂಂ ಸಹ ತೆರೆದಿದ್ದಾರೆ. ಸಿಎಂ ಪರಿಹಾರ ನಿಧಿಗೂ ಶಾಸಕರು ಅವರ ಕಮಾರೆಡ್ಡಿ ಸಮುದಾಯದಿಂದ 5 ಲಕ್ಷ, ವೈಯಕ್ತಿಕ ಹಾಗೂ ಶಾಸಕರ ಅನುದಾನದಲ್ಲಿ 10 ಲಕ್ಷ ಸೇರಿ ಒಟ್ಟು 22 ಲಕ್ಷ ರೂಪಾಯಿ ಹಣವನ್ನು ದೇಣಿಗೆ ನೀಡಲಾಗಿದೆ.
ಚಿತ್ರದುರ್ಗದಲ್ಲಿ ಕೊರೊನಾ ಹರಡದಂತೆ ಕಾಳಜಿ ವಹಿಸುತ್ತಿರುವ ಪೊಲೀಸರು, ನಗರಸಭೆ ಸಿಬ್ಬಂದಿ, ಪತ್ರಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ರಕ್ಷಣೆಗಾಗಿ ಅಗತ್ಯವಿರುವ ಎರಡು ಲಕ್ಷ ರೂಪಾಯಿ ಮೌಲ್ಯದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿರುವ ಶಾಸಕರು, ಲಾಕ್ಡೌನ್ ಸಂಪೂರ್ಣ ತೆರವುಗೊಳಿಸುವವರೆಗೆ ನಿರಂತರವಾಗಿ ಈ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.