– ಯಾರ ಬಳಿಯಲ್ಲೂ ಒಂದು ಚಹಾ ಕುಡಿದಿಲ್ಲ
ಉಡುಪಿ: ನನ್ನನ್ನು ಎರಡು ಬಾರಿ ನೀವು ಗೆಲ್ಲಿಸಿದ್ದೀರಿ. ನೀವೆಲ್ಲರೂ ಕೆಲಸ ಮಾಡಿ ಗೆಲ್ಲಿಸಿದ ಕಾರಣಕ್ಕೆ ಇಂದು ನಾನು ಕೇಂದ್ರ ಸಚಿವೆಯಾಗಿದ್ದೇನೆ. ಮೋದಿಯವರು ನನ್ನನ್ನು ಗುರುತಿಸಿ ಕೆಲಸ ಕೊಟ್ಟಿದ್ದಾರೆ ಎಂದು ಶೋಭಾ ಕರಂದ್ಲಾಜೆ (Shobha Karandlaje) ಭಾವುಕರಾಗಿದ್ದಾರೆ.
ಉಡುಪಿಯಲ್ಲಿ ಲೋಕಸಭಾ ಚುನಾವಣಾ ಕಚೇರಿ (Loksabha Election Office, Udupi) ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದೇನೆ. ಒಬ್ಬ ಗುತ್ತಿಗೆದಾರನನ್ನು ಕೂಡ ನಾನು ಮಾತನಾಡಿಸಿಲ್ಲ. ಮೋದಿಯನ್ನು ಪ್ರಧಾನಿಯಾಗಿ ಪಡೆದ ಪಕ್ಷದಲ್ಲಿ ನಾವಿದ್ದೇವೆ ಅನ್ನೋದೇ ಹೆಮ್ಮೆಯ ವಿಚಾರ. ನಿಮ್ಮ ಜನಪ್ರತಿನಿಧಿಯಾಗಿ ನಾನು ಪ್ರಾಮಾಣಿಕವಾಗಿ ಹಿರಿಯರ ಮೇಲ್ಪಂಕ್ತಿಯಲ್ಲಿ ಕೆಲಸ ಮಾಡಿದ್ದೇನೆ. ಇನ್ನೊಬ್ಬರ ಮುಂದೆ ಕೈ ಚಾಚದೆ ಕೆಲಸ ಮಾಡುತ್ತಿದ್ದೇನೆ ಎಂದರು.
ವ್ಯವಹಾರ ಮಾಡದೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನೀವು ಕೊಟ್ಟ ವೋಟಿಗೆ ಮಾನ ಮರ್ಯಾದೆ ಬರುವಂತೆ ನಡೆದುಕೊಂಡಿದ್ದೇನೆ. ಯಾರ ಬಳಿಯಲ್ಲೂ ಒಂದು ಚಹಾ ಕುಡಿದಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ನನ್ನ ರಾಜಕಾರಣ ಮಾಡಿದ್ದೇನೆ. ಉಡುಪಿಯಲ್ಲಿ ನಾನು ಪ್ರಾಮಾಣಿಕ ರಾಜಕೀಯ ಮಾಡಿದ್ದೇನೆ. ನೀವೆಲ್ಲ ದುಡಿದ ಕಾರಣಕ್ಕೆ ನಾನು ಜನಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಹೂ ಮುಡಿಸಿದ್ದಾರೆ: ಹೆಚ್ಡಿಕೆ ಕಿಡಿ
ಪಾರ್ಟಿ ಹೇಳಿದಂತೆ ಕೇಳುವವಳು: ನಾನು ಉಡುಪಿ-ಚಿಕ್ಕಮಗಳೂರು ಜಿಲ್ಲೆಯವಳಲ್ಲ. ಆದರೂ ನನ್ನನ್ನು ಎರಡು ಬಾರಿ ನೀವು ಗೆಲ್ಲಿಸಿದ್ದೀರಿ. ಬೆಂಗಳೂರಿನ ಜನ ನನ್ನನ್ನು ಯಶವಂತಪುರದಲ್ಲಿ ಗೆಲ್ಲಿಸಿದರು. ನೀವೆಲ್ಲರೂ ಕೆಲಸ ಮಾಡಿ ಗೆಲ್ಲಿಸಿದ ಕಾರಣಕ್ಕೆ ಇಂದು ನಾನು ಕೇಂದ್ರ ಸಚಿವೆಯಾಗಿದ್ದೇನೆ. ಮೋದಿಯವರು ನನ್ನನ್ನು ಗುರುತಿಸಿ ಕೆಲಸ ಕೊಟ್ಟಿದ್ದಾರೆ. ಕಾರ್ಯಕರ್ತರೆಲ್ಲರೂ ಕುಣಿದು ಕುಪ್ಪಳಿಸುವ ಫಲಿತಾಂಶ ಬರಲಿದೆ. ನಾವು ಪಾರ್ಟಿ ಏನು ಹೇಳುತ್ತೋ ಅದನ್ನು ಕೇಳುವವರು. ಟಿಕೆಟಿಗಾಗಿ ಅವರು ಇವರು ಓಡಾಡುತ್ತಿದ್ದಾರೆ. ಟಿಕೆಟ್ ಗೆ ಯಾರೇ ಓಡಾಡಲಿ ನನಗೆ ಏನೂ ಸಂಬಂಧ ಇಲ್ಲ ಎಂದು ತಿಳಿಸಿದರು.
ಇಟ್ಟಿಗೆ ಎಲ್ಲಿದೆ ಎಂದು ಕೇಳ್ತಿದ್ದವರಿಗೆ ಅಯೋಧ್ಯೆ ಸಾಕ್ಷಿ: ನಾನು ಪಾರ್ಟಿಯ ಕಾರ್ಯಕರ್ತೆ ಅಷ್ಟೇ. ಪಕ್ಷ ಏನು ಹೇಳುತ್ತೆ ಅದನ್ನು ಕೇಳುವವಳು. ಇಲ್ಲಿ ನಮ್ಮ ಸ್ವಂತ ಏನೂ ಇಲ್ಲ. ಮೋದಿ ಏನು ಹೇಳುತ್ತಾರೆ ಅದನ್ನು ಕೇಳುವಂತ ಸಹಪಾಠಿಗಳು. ಮೋದಿಯವರು ಏನು ಹೇಳುತ್ತಾರೋ ಅದನ್ನು ಉತ್ಸಾಹದಿಂದ ಮಾಡಿದ್ದೇವೆ. ಮಂದಿರಗೆ ತೆಗೆದುಕೊಂಡು ಹೋದ ಇಟ್ಟಿಗೆ ಎಲ್ಲಿದೆ ಎಂದು ಕೆಲವರು ಕೇಳುತ್ತಿದ್ದರು. ಆ ಇಟ್ಟಿಗೆಗಳು ಎಲ್ಲಿದೆ ಎಂಬುದನ್ನು ಅಯೋಧ್ಯೆಯಲ್ಲಿ ತೋರಿಸಿಕೊಟ್ಟಿದ್ದೇವೆ. ಮೋದಿ ಯಾವುದನ್ನೂ ಹೇಳುತ್ತಾರೆ, ಅದರಂತೆ ನಡೆದುಕೊಳ್ಳುತ್ತಾರೆ. ನಾವು ಕೆಲಸ ಮಾಡುವುದು ನಮ್ಮ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಂದು ಹೇಳಿದರು.