ನವದೆಹಲಿ: ಪತಿ-ಪತ್ನಿ ಜಗಳ ಮಾಡುತ್ತಿದ್ದಾಗ ನೋಡಿ ನಕ್ಕಿದ ಯುವಕನೋರ್ವನ ಎರಡು ಕನ್ನೆಯನ್ನೇ ಪತಿರಾಯ ಕತ್ತರಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಕಲ್ಯಾಣನಗರದ ನಿವಾಸಿ ಕುಮಾಲ್(17) ಗಾಯಗೊಂಡ ಯುವಕ. ಕಲ್ಯಾಣನಗರದಲ್ಲಿ ಗುರುವಾರದಂದು ದಂಪತಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಯುವಕ ಅವರಿಬ್ಬರ ಜಗಳ ನೋಡಿ ನಕ್ಕಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪತಿರಾಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ.
ಯುವಕನನ್ನು ಮರುದಿನ ಪಾರ್ಕಿಗೆ ಕರೆದುಕೊಂಡು ಹೋದ ಆರೋಪಿ, ನಿನ್ನೆ ನೀನು ನಮ್ಮ ಜಗಳ ನೋಡಿ ನಗುತ್ತಿದ್ದೆ. ನನ್ನ ಪತ್ನಿ ಜೊತೆ ಜಗಳವಾಡಿದರೆ ನೀನೇಕೆ ನಕ್ಕಿದ್ದು ಎಂದು ಪ್ರಶ್ನಿಸಿ, ನಮ್ಮನ್ನ ನೋಡಿ ನಕ್ಕಿದ್ದಕ್ಕೆ ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಏಕಾಏಕಿ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಎರಡೂ ಕೆನ್ನೆಯನ್ನು ಬ್ಲೇಡ್ ನಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.