ಮಂಡ್ಯ: ಆಂಟಿಯರ ಶೋಕಿಗಾಗಿ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕದ್ದು ತನ್ನ ಶೋಕಿ ತೀರಿಸಿಕೊಳ್ಳುತ್ತಿದ್ದವನನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು (Mandya Police) ಯಶಸ್ವಿಯಾಗಿದ್ದಾರೆ.
ಮದ್ದೂರು ಮೂಲದ ರವಿಕಿರಣ್(32) ಬಂಧಿತ ಆರೋಪಿ. ಆಂಟಿಯ ಸೆರಗಿಗೆ ಸಿಕ್ಕಿಕೊಂಡು ಅವರೊಂದಿಗೆ ಕಾಲ ಕಳೆಯಲು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಖದಿಯುವ ಕೆಲಸ ಮಾಡುತ್ತಿದ್ದ. ಈತ ಅ.15 ರಂದು ಕೆಲಸ ಹುಡುಕಿಕೊಂಡು ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಬಂದಿದ್ದ. ಅಂತೆಯೇ ತೋಟದ ಮನೆಯೊಂದರಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದಾನೆ. ಮಾಲೀಕರಿಲ್ಲದ ಸಮಯ ನೋಡಿಕೊಂಡು ಮನೆಯೊಳಕ್ಕೆ ಹೋಗಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ.
ಇತ್ತ ಅ.17ರಂದು ಮಾಲೀಕರಿಗೆ ಕಳುವಾಗಿರುವ ಮಾಹಿತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮರುದಿನ ಬಸರಾಳು ಪೊಲೀಸ್ ಠಾಣೆ (Basaralu Police Station) ಗೆ ದೂರು ಸಲ್ಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಕೆಲಸಕ್ಕೆ ಸೇರಿಕೊಳ್ಳುವಾಗ ಕೊಟ್ಟಿದ್ದ ಆಧಾರ್ಕಾರ್ಡ್ ಪಡೆದು ಬೆನ್ನತ್ತಿದಾಗ ಕೊಪ್ಪ ಸಕ್ಕರೆ ಕಾರ್ಖಾನೆ ಬಳಿ 21ರಂದು ಸಿಕ್ಕಿಬಿದ್ದಿದ್ದಾನೆ. ಬಳಿಕ ನ್ಯಾಯಾಂಗದ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆಂದು ಪೊಲೀಸರು ವಶಕ್ಕೆ ಪಡೆದರು. ಇದನ್ನೂ ಓದಿ: ನಮಗೆ ಪ್ರಧಾನಿ ಬೇಕು, ಜೋಕರ್ ಅಲ್ಲ – `ಗೋ-ಬ್ಯಾಕ್ ಮೋದಿ’ ಅಭಿಯಾನ
ನಂತರ ವಿಚಾರಣೆ ವೇಳೆ ಚಿನ್ನಾಭರಣವನ್ನು ಮುಳಬಾಗಿಲಿನಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ತನಿಖಾ ತಂಡ 58 ಗ್ರಾಂ ತೂಕದ ಚಿನ್ನದ ಸರ, 18 ಗ್ರಾಂ ತೂಕದ ಉಂಗುರ ಹಾಗೂ 15 ಗ್ರಾಂ ತೂಕದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಇತ್ತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತು.
ತನಿಖಾ ತಂಡದಲ್ಲಿದ್ದ ಕೆರಗೋಡು ವೃತ್ತದ ಸಿಪಿಐ ಕ್ಯಾತೇಗೌಡ, ಬಸರಾಳು ಪಿಎಸ್ಐ ಮಲ್ಲಪ್ಪ, ಸಿಬ್ಬಂದಿ ಎನ್.ಎಸ್.ಸೋಮಶೇಖರ್, ಮಧುಕುಮಾರ್, ಅರುಣ, ಕೃಷ್ಣಕುಮಾರ್ ಮತ್ತು ಮಹದೇವ್ ಅವರನ್ನು ಜಿಲ್ಲಾ ಎಸ್ಪಿ ಎನ್.ಯತೀಶ್ ಅಭಿನಂದಿಸಿದ್ದಾರೆ.