ಜೈಪುರ: ಸ್ಕಾರ್ಪಿಯೋ ಎಸ್ಯುವಿ (Scorpio SUV) ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಡದ ಅಂಬೆನಾಲಿ ಘಾಟ್ ಬಳಿ ನಡೆದಿದೆ.
ಮಹಾಬಲೇಶ್ವರ ಮತ್ತು ಪೋಲಾದ್ಪುರದ ನಡುವೆ ಇರುವ ಅಂಬೆನಾಲಿ ಘಾಟ್ (Ambenali Ghat) ಬಳಿ ದುರಂತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 8 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪೊಲೀಸರು ಶೋಧ ಆರಂಭಿಸಿದ್ದಾರೆ. ಇದನ್ನೂ ಓದಿ: ಭಟ್ಕಳ ನದಿ ದುರಂತ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಅಂಶ್ ಸಮೀರ್ ಚವ್ಹಾಣ್ (19), ರಿತೇಶ್ ರಾಜೇಂದ್ರ ಲೋಖಂಡೆ (22), ಸುಹಾಸ್ ಜಿತೇಂದ್ರ ಲೋಖಂಡೆ (20), ಉತ್ಕರ್ಷ್ ಆನಂದ್ ಶಿಂಗ್ಟೆ (21), ನಿಖಿಲ್ ಅಭಿಮನ್ಯು ಶಿಂಗ್ಟೆ (25), ಮಹೇಶ್ ಅನಿಲ್ ಪವಾರ್ (25), ಆದಿತ್ಯ ಅಶೋಕ್ ಸಾಳುಂಖೆ (21), ರಾಜೇಶ್ ಅಶೋಕ್ ಕಾಟ್ಕರ್ (35) ಮೃತರು. ಬಲಿಪಶುಗಳೆಲ್ಲರೂ ಸತಾರಾ ಜಿಲ್ಲೆಯ ಮೂಲದವರೆಂದು ತಿಳಿದುಬಂದಿದೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ತೈಲ ಶಾಕ್ – ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ದರ ಏರಿಕೆ ಹೇಗಿದೆ?
ಮೂಲಗಳ ಪ್ರಕಾರ, ಸ್ಕಾರ್ಪಿಯೋ ಎಸ್ಯುವಿ ಸತಾರಾ ಜಿಲ್ಲೆಯ ಅಸ್ಗಾಂವ್ ಗ್ರಾಮಕ್ಕೆ ಸೇರಿದ ವ್ಯಕ್ತಿಯದ್ದಾಗಿದೆ. ದಪೋಲಿಯಿಂದ ಸತಾರಾಗೆ ಹೋಗುತ್ತಿದ್ದಾಗ ವಾಹನ ಕಮರಿಗೆ ಬಿದ್ದಿದೆ. ಸುಮಾರು 500 ರಿಂದ 700 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಈಗಾಗಲೇ ರಕ್ಷಣಾ ತಂಡಗಳು 2 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಇನ್ನುಳಿದ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಗಢ ಮತ್ತು ಸತಾರ ಜಿಲ್ಲೆಗಳ ಗಡಿಯಲ್ಲಿರುವ ಅಂಬೇನಾಲಿ ಘಾಟ್ ಅಪಘಾತಗಳ ಹಾಟ್ಸ್ಪಾಟ್ ಎಂದೇ ಕರೆಯಲಾಗುತ್ತದೆ. ಏಕೆಂದ್ರೆ ಇಲ್ಲಿ ಆಗಾಗ್ಗೆ ಭೀಕರ ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಮೃತರು ಕೊಂಕಣ ಅಥವಾ ಮಹಾಬಲೇಶ್ವರಕ್ಕೆ ಭೇಟಿ ನೀಡಲು ಬಂದಿರಬೇಕು ಶಂಕಿಸಲಾಗಿದೆ. ಸದ್ಯ ರಕ್ಷಣಾ ತಂಡಗಳು ಶೋಧ ನಡೆಸುತ್ತಿದ್ದು, ಮತ್ತೊಂದು ಕಡೆ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.
