ನವದೆಹಲಿ: ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ನಾಯಕ ಹಾಗೂ ಬಿಹಾರ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ)ದ ವಿಶೇಷ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ರೂ. ದಂಡ ವಿಧಿಸಿದೆ.
ಫೆ.15 ರಂದು ಆರ್ಜೆಡಿ ಮುಖ್ಯಸ್ಥರನ್ನು ಈ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಯಾದವ್ ಅವರು ಡೊರಾಂಡಾ ಖಜಾನೆಯಿಂದ 139 ಕೋಟಿ ಹಣವನ್ನು ಅಕ್ರಮವಾಗಿ ಪಡೆದಿದ್ದರು. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್ ದೋಷಿ – CBI ಕೋರ್ಟ್
ಮೇವು ಹಗರಣದ ಐದನೇ ಪ್ರಕರಣದಲ್ಲಿ ಯಾದವ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಕಳೆದ ವಾರ ಅನಾರೋಗ್ಯದ ಕಾರಣದಿಂದಾಗಿ ಯಾದವ್ ಅವರನ್ನು ಹೊತ್ವಾರ್ ಜೈಲಿನಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ದುಮ್ಕಾಗೆ ಸಂಬಂಧಿಸಿದ ಇತರ ನಾಲ್ಕು ಪ್ರಕರಣಗಳಲ್ಲಿ ಈ ಹಿಂದೆ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಡೊರಾಂಡಾ ಖಜಾನೆ ಹಗರಣ ಪ್ರಕರಣದಲ್ಲಿ ಒಟ್ಟು 170 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇವರಲ್ಲಿ 55 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಸರ್ಕಾರಿ ಸಾಕ್ಷಿಗಳಾಗಿದ್ದಾರೆ. 6 ಮಂದಿ ತಲೆಮರೆಸಿಕೊಂಡಿದ್ದಾರೆ. ಇಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಯಾದವ್ ಸೇರಿದಂತೆ ಉಳಿದ 99 ಆರೋಪಿಗಳಲ್ಲಿ 24 ಮಂದಿ ಖುಲಾಸೆಗೊಂಡಿದ್ದಾರೆ. ಉಳಿದ 46 ಮಂದಿಯನ್ನು ದೋಷಿಗಳು ಎಂದು ಘೋಷಿಸಿ, ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ನಾನು ಇಂತಹ ರಾಜಕೀಯದ ವಿರುದ್ಧ ಸತ್ತಿದ್ದೇನೆ: ಕಮಲ್ ಹಾಸನ್