ಚಾಮರಾಜನಗರ: ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕೊಳ್ಳೇಗಾಲದ ಮತದಾರ ಭರ್ಜರಿ ಗೆಲುವನ್ನೇ ಕೊಟ್ಟಿದ್ದಾನೆ.
ಹಾಲಿ ಬಿಜೆಪಿ (BJP)ಶಾಸಕ ಎನ್.ಮಹೇಶ್ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೇ ಮೇಲೆದ್ದಿದ್ದಾರೆ. ಈ ಗೆಲುವು ಅವರ ಒಂದು ಮತದಿಂದ ಸೋತ ನೋವನ್ನು ಮರೆಸಿದೆ. ಬಿಎಸ್ಪಿ (BSP) ಬೆಂಬಲ, ಅನುಕಂಪ, ಜೊತೆಗೆ ಮಹೇಶ್ ಅವರಿಗಿದ್ದ ವ್ಯಾಪಕ ವಿರೋಧ ಎ.ಆರ್.ಕೃಷ್ಣಮೂರ್ತಿಯವರಿಗೆ ಅನುಕೂಲವಾಗಿದೆ. ಇದು ಮತಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಯುವಕ
ಇದಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಮೂರ್ತಿಯವರು, ಒಂದು ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯವಾಗಿದೆ. ಈಗ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಈ ವಿಚಾರ ನನಗೆ ಖುಷಿ ತಂದಿದೆ. ಮತದಾರರು ನನಗೆ ಆಶಿರ್ವಾದ ಮಾಡಿದ್ದಾರೆ ಎಂದಿದ್ದಾರೆ.
ಅವರು 1,08,363 ಮತಗಳನ್ನು ಗಳಿಸಿದ್ದಾರೆ. ಎನ್ ಮಹೇಶ್ 48,844 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ. 2004ರ ಚುನಾವಣೆಯಲ್ಲಿ ಕೃಷ್ಣಮೂರ್ತಿಯವರು ಒಂದು ಮತದಿಂದ ಸೋತಿದ್ದರು. ಇದೀಗ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ 6ರಲ್ಲಿ ಜಯ – 2ರಲ್ಲಿ ಕಾಂಗ್ರೆಸ್ ಗೆಲುವು