ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ (Congress) ಗೆ ಬಹುಮತದ ಸುಳಿವು ಸಿಗುತ್ತಿದ್ದಂತೆಯೇ ಪಕ್ಷದಲ್ಲಿ ನಾನಾ ಲೆಕ್ಕಾಚಾರ ಶುರುವಾಗಿದೆ. ಆಂತರಿಕವಾಗಿ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ.
ಸಿಎಂ ಕುರ್ಚಿ ಕನಸು ಕಂಡ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (D.K Shivakumar) ತಮ್ಮದೇ ಆದ ಲೆಕ್ಕಾಚಾರಕ್ಕೆ ಮುಂದಾದಂತೆ ಕಾಣುತ್ತಿದೆ. ಸಿದ್ದರಾಮಯ್ಯಗೆ ಶಾಸಕರ ಬೆಂಂಬಲದ ವಿಶ್ವಾಸವಾದರೆ, ಡಿಕೆಶಿಗೆ ಹೈಕಮಾಂಡ್ ಮೇಲೆ ಅಪಾರವಾದ ನಂಬಿಕೆ. ಸಿದ್ದರಾಮಯ್ಯಗೆ ನೂತನ ಶಾಸಕರ ಬೆಂಬಲದ ವಿಶ್ವಾಸವಿದ್ದು, ಅದೇ ಕಾರಣಕ್ಕೆ 2013ರ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮೂಡುಶೆಡ್ಡೆ ಘಟನೆಗಳಿಗೆ ಮಿಥುನ್ ರೈ ಪ್ರಚೋದನೆಯೇ ಕಾರಣ: ಉಮಾನಾಥ್ ಕೋಟ್ಯಾನ್ ಕಿಡಿ
ಕೆಪಿಸಿಸಿ (KPCC) ಅಧ್ಯಕ್ಷರನ್ನ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿದೆ. ಅದು ತಮ್ಮ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ. ಎಕ್ಸಿಟ್ ಪೋಲ್ (Exit Poll) ಆಧರಿಸಿ ಸಿಎಂ ಕುರ್ಚಿ ಕದನದಲ್ಲಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಉಭಯ ನಾಯಕರು ಇದ್ದಾರೆ ಎನ್ನಲಾಗಿದೆ. ಇದೇ ಲೆಕ್ಕಾಚಾರ ಹಾಗೂ ನಂಬಿಕೆಯಲ್ಲಿ ಕೈ ಪಾಳಯ ಇದ್ದು ಎಕ್ಸಿಟ್ ಪೋಲ್ ನಿಂದಾಗಿ ಸಿಎಂ ಕುರ್ಚಿ ಕನಸು ಜೋರಾಗಿದೆ ಅಂತ ಹೇಳಲಾಗ್ತಿದೆ. ಈ ಮಧ್ಯೆ ಪರಮೇಶ್ವರ್ (G Parameshwar) ಕೂಡ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ನೋಡಿದ್ದಾರೆ. ಆದರೆ ಮಾಜಿ ಮಂತ್ರಿ ಕೃಷ್ಣಬೈರೇಗೌಡರು ಮಾತ್ರ ಬೇರೆಯದ್ದೇ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಸಿಎಂ ಪಟ್ಟಕ್ಕೆ ಅರ್ಹರಿದ್ದಾರೆ. ಇಬ್ಬರಿಗೂ ಅವಕಾಶ ಸಿಗಬೇಕು ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೊತ್ತರ ಸಮೀಕ್ಷೆಗಳ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಜೋರಾಗಿದೆ. ಅತಂತ್ರ ಪರಿಸ್ಥಿತಿ ನಿಭಾಯಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೀತಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿ (Independent Candidates) ಗಳ ಮೇಲೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಾಯಕರು ಕಣ್ಣಿಟ್ಟಿದ್ದಾರೆ. ಸ್ವತಂತ್ರ ಸರ್ಕಾರಕ್ಕಾಗಿ ಪಕ್ಷೇತರ ಅಭ್ಯರ್ಥಿಗಳ ಮೇಲೆ ನಿಗಾ ವಹಿಸಿದ್ದು, ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಮುಖ ನಾಯಕರಿಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಸಂಪರ್ಕದಲ್ಲಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸೂಚನೆ ಹಿನ್ನಲೆ ಪಕ್ಷೇತರಾಗಿ ಆಯ್ಕೆಯಾಗುವ ನಾಯಕರ ಸಂಪರ್ಕಕ್ಕೆ ಉಭಯ ಪಕ್ಷದ ನಾಯಕರ ಪ್ರಯತ್ನ ನಡೆಸುತ್ತಿದ್ದಾರೆ.