ವಿಜಯಪುರ: ಕನ್ನಡ ಚಿತ್ರರಂಗದ ನಟ-ನಟಿಯರನ್ನ (Cinema Actress) ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.
ಕನ್ನಡ ಚಿತ್ರರಂಗದ ನಟ ನಟಿಯರು ಕಾವೇರಿ ಹೋರಾಟದಲ್ಲಿ (Cauvery Protest) ಭಾಗಿಯಾಗುತ್ತಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ನಗರದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ನಟ, ನಟಿಯರು ಈಗಲಾದರೂ ಹೊರಬರಲಿ. ಚಿತ್ರರಂಗದ ಮೂಲಕ ಹಣ ಮಾಡಿಕೊಂಡಿದ್ದಾರಲ್ಲ ಈಗಲಾದರೂ ಹೊರಬರಲಿ, ಹೋರಾಟಕ್ಕೆ ಕೈಜೋಡಿಸಲಿ. ಇಲ್ಲದಿದ್ದರೆ ಯಾರು ಕಾವೇರಿ ಹೋರಾಟದಲ್ಲಿ ಭಾಗಿಯಾಗುವುದಿಲ್ಲವೋ ಅವರ ಚಿತ್ರಗಳನ್ನ ಜನರು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯವಾದ್ರೆ ಸಹಿಸಲ್ಲ – ʻಕರ್ನಾಟಕ ಬಂದ್ʼಗೆ ತಮಿಳು ಸಂಘದಿಂದ ಬೆಂಬಲ
ನಾನೂ ಸಿನಿಮಾದಲ್ಲಿ ಸಿಎಂ ಪಾತ್ರ ಮಾಡಿದ್ದೆ: ಕಾವೇರಿ ಹೋರಾಟದಲ್ಲಿ ಭಾಗಿಯಾಗಬೇಕು ಅಂತ ಚಿತ್ರ ನಟ, ನಟಿಯರ ಮನೆಗೆ ಹೋಗಿ ಆರತಿ ಎತ್ತಿ ಕರೆಯಬೇಕಾ? ಕಾವೇರಿ ನದಿ ನೀರಿನ ವಿಚಾರದಲ್ಲಿ ಸ್ವಯಂ ಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗಬೇಕು. ಇಲ್ಲಿಯ ನಟ-ನಟಿಯರ ಚಿತ್ರಗಳನ್ನ ಕನ್ನಡದವರೇ ವೀಕ್ಷಣೆ ಮಾಡೋದು. ಕಾವೇರಿ ತೀರದ ಭಾಗದವರೇ ಹೆಚ್ಚಿನವರು ಚಿತ್ರರಂಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಯಾರೂ ಹೀರೋಗಳಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಕೇವಲ ಹಾಸ್ಯ ಪಾತ್ರಗಳನ್ನ ಮಾತ್ರ ಕೊಡುತ್ತಾರೆ. ನಾನು ಕೂಡ ಒಂದು ಸಿನಿಮಾದಲ್ಲಿ ಸಿಎಂ ಪಾತ್ರ ಮಾಡಿದ್ದೆ ಎಂದು ಯತ್ನಾಳ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ದೇವೇಗೌಡರಿಂದ ಪತ್ರ; ಸಿದ್ದರಾಮಯ್ಯ ಶ್ಲಾಘನೆ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರಕ್ಕೆ ಕೇಳಿ ತಮಿಳುನಾಡಿಗೆ ನೀರು ಬಿಟ್ರಾ? ತಮಿಳುನಾಡಿನ ಮುಖ್ಯಮಂತ್ರಿಯನ್ನ ಖುಷಿಪಡಿಸಲು ರಾತ್ರೋ ರಾತ್ರಿ ನೀರು ಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಈಗ ಏಕೆ ಹಸ್ತಕ್ಷೇಪ ಮಾಡಬೇಕು? ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ್ಮೇಲೆ ಒಂದುಬಾರಿಯೂ ಸಂಸದರ ಸಭೆ ಮಾಡಿಲ್ಲ. ಕಾವೇರಿ ನದಿ ನೀರಿನ ವಿಚಾರ ಉಲ್ಬಣಗೊಂಡ ಬಳಿಕ ಕಾಟಾಚಾರಕ್ಕೆ ಸಭೆ ಮಾಡಿದ್ದಾರೆ ಎಂದು ದೂರಿದ್ದಾರೆ.
Web Stories