ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ (Kadalekai Parishe) ಇಂದಿನಿಂದ ಆರಂಭವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಾಲಯದ ಬಳಿ ಸುಗ್ಗಿಯ ವೈಭವ ಜೋರಾಗಿದ್ದು, ಎತ್ತ ನೋಡಿದ್ರು ಜಾತ್ರಾ ಮೆರುಗು ಸಿಟಿಯ ಮಧ್ಯೆ ಗ್ರಾಮೀಣ ಸೊಬಗನ್ನ ರಂಗೇರಿಸುತ್ತಿದೆ.
ತನ್ನದೇ ಆದ ಇತಿಹಾಸ ಹೊಂದಿರೋ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ದೊಡ್ಡ ಗಣೇಶನ ದೇವಾಲಯದಲ್ಲಿ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಲಾಯ್ತು. ಸಂಸದ ತೇಜಸ್ವಿಸೂರ್ಯ, ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಅಧಿಕೃತ ಚಾಲನೆ ನೀಡಿದ್ರು.
ಬೆಂಗಳೂರಿನ ಐತಿಹಾಸಿಕ 'ಬಸವನಗುಡಿ ಕಡಲೆ ಕಾಯಿ ಪರಿಷೆ' ಗೆ ವಿದ್ಯುಕ್ತವಾಗಿ ಇಂದು ಚಾಲನೆ ನೀಡಲಾಗಿದ್ದು, ಬಸವನಗುಡಿ ಶಾಸಕರಾದ ಶ್ರೀ @Ravi_LA , ಚಿಕ್ಕಪೇಟೆ ಶಾಸಕರಾದ ಶ್ರೀ @BGUdayBJP ರೊಂದಿಗೆ ಪಾಲ್ಗೊಂಡು ಆಶೀರ್ವಾದ ಪಡೆದೆನು.
ಕಡಲೆಕಾಯಿ ಪರಿಷೆಯ ಇತಿಹಾಸ:
ನಾಡಪ್ರಭು ಶ್ರೀ ಕೆಂಪೇಗೌಡರ ಕಾಲದಿಂದಲೂ ಪರಿಷೆಯು ಪ್ರವರ್ಧಮಾನಕ್ಕೆ… pic.twitter.com/n3QinpXAc0
— Tejasvi Surya (@Tejasvi_Surya) December 11, 2023
ಹಿಂದಿನಿಂದಲೂ ಸಂಪ್ರದಾಯದಂತೆ ಕಡಲೆಕಾಯಿ ಉತ್ಸವ ಮಾಡಿಕೊಂಡು ಬರಲಾಗಿದ್ದು, ಈ ಹಿಂದೆ ಜಮೀನುಗಳಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡಲಾಗ್ತಿತ್ತು. ಆದರೆ 2008ರಿಂದ ಪರಿಷೆಗೆ ಹೊಸ ಆಯಾಮ ಕೊಡಲಾಗಿದೆ. ವಿಶೇಷವಾಗಿ 1 ವಾರದವರೆಗೂ ಜಾತ್ರೆ ನಡೆಯಲಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಜನ ಪರಿಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಕೂಡ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಭ್ರದತೆ ದೃಷ್ಟಿಯಿಂದ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮಹಿಳೆಯರ ಸೇಫ್ಟಿ ದೃಷ್ಟಿಯಿಂದ ಅನೌನ್ಸ್ ಮೆಂಟ್ ಸೇರಿದಂತೆ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಇಂದು ಸಂಜೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಿದೆ.
ಪರಿಷೆಗೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಮಾತನಾಡಿ, ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ನಮ್ಮ ನೆಲದ ಸಂಸ್ಕೃತಿ ಇಂದಿಗೂ ಜೀವಂತವಾಗಿರೋದು ಈ ರೀತಿಯ ಆಚರಣೆಯಿಂದಗಳಿಂದಲೇ. ಈ ವರ್ಷವೂ ಲಕ್ಷಾಂತರ ಜನರು ಭಾಗಿಯಾಗ್ತಿದ್ದಾರೆ. ಪ್ರಧಾನ ಮಂತ್ರಿಗಳು ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಅದೇ ರೀತಿ ಕಡಲೆಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ಆಗಲಿದೆ. ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯಲಿದೆ. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆ ತನ್ನಿ ಎಂದ್ರು.
ಇಂದಿನಿಂದ ಆರಂಭವಾಗಿರೋ ಪರಿಷೆ ಇನ್ನೂ ಮೂರು ದಿನ ನಗರದ ಮಧ್ಯ ಭಾಗದಲ್ಲಿ ಹಳ್ಳಿ ಸೊಬಗನ್ನ ಸೃಷ್ಟಿಸಿರೊದಂತು ಸುಳ್ಳಲ್ಲ. ನೀವು ಭೇಟಿ ಕೊಡಿ, ವೈಭವವನ್ನ ಆನಂದಿಸಿ.