ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್ನವರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್ನವರು ಮುಕ್ತ ಕಂಠದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್ಗೂ ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದರು.
- Advertisement 2
- Advertisement 3
ನಾನಾಗಲಿ(ಡಿ.ಕೆ.ಶಿವಕುಮಾರ್), ಡಾ.ಜಿ.ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯನವರು ಯಾರಾದರೂ ಸರಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕೆಂದು ಕೇಳಿಕೊಂಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
- Advertisement 4
ನಾಳೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಶಾಸಕರನ್ನು ನಾವು ಮನವೊಲಿಸುತ್ತೇವೆ. ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ನಾನು ಸ್ಟಂಟ್ ಮಾಡುತ್ತಿದ್ದೇನೆ. ತೋರಿಕೆಗೆ ಓಡಾಡುತ್ತಿದ್ದೇನೆ. ಏನೂ ಕೆಲಸ ಮಾಡುತ್ತಿಲ್ಲ ಎಂದು ನನ್ನ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ನನಗೆ ಅಭ್ಯಂತರವಿಲ್ಲ. ಎಲ್ಲರೂ ಟೀಕಿಸಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರ್ಕಾರ ಉಳಿಸಿಕೊಳ್ಳುವಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಸಿಎಂ ಕೊನೆಯ ದಾಳ
ಅತೃಪ್ತ ಶಾಸಕರ ಮನವೊಲಿಕೆಗೆ ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಈಗ ಹೇಗಾದರೂ ಮಾಡಿ ಸರ್ಕಾರ ಉಳಿಸಲು ಸಿಎಂ ಈ ಕೊನೆಯ ದಾಳವನ್ನು ಪ್ರಯೋಗಿಸಿದ್ದಾರೆ. ದೋಸ್ತಿ ಸರ್ಕಾರದ 17 ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪಡಿಸುವುದು ಕಷ್ಟ ಎನ್ನುವುವುದು ಸಿಎಂಗೆ ಗೊತ್ತಾಗಿದೆ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿದ್ದಾರೆ.
2018ರಲ್ಲಿ ಚುನಾವಣೆಯ ಬಳಿಕ 5 ವರ್ಷಗಳ ಕಾಲ ಸಿಎಂ ದಳಕ್ಕೆ ಎನ್ನುವ ನಿರ್ಧಾರಕ್ಕೆ ಎರಡು ಪಕ್ಷಗಳು ಒಪ್ಪಿಕೊಂಡಿತ್ತು. ಆದರೆ ಈಗ ಕಾಂಗ್ರೆಸ್ಸಿನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ನೀಡಲು ಮುಂದಾಗಿದ್ದಾರೆ. ನಮ್ಮ ಪ್ರಯತ್ನಗಳು ಮುಗಿದಿವೆ. ಇನ್ನು ನಮ್ಮಿಂದ ಆಗುವುದಿಲ್ಲ. ನಿಮ್ಮ ಶಾಸಕರನ್ನ ಕರೆತಂದು ನೀವೇ ಸಿಎಂ ಆಗಿ ಸರ್ಕಾರವನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.
ನಮಗೆ ಸರ್ಕಾರ ಉಳಿಯಬೇಕು, ನಾನು ಸಿಎಂ ತ್ಯಾಗ ಮಾಡಲು ಸಿದ್ಧ. ನಾವು ಬಾಹ್ಯ ಬೆಂಬಲವನ್ನು ನೀಡುತ್ತೇವೆ. ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಯಾರಾದ್ರೂ ಸಿಎಂ ಆಗಲಿ. ಈ ನಿರ್ಧಾರಕ್ಕೆ ದೇವೇಗೌಡರು ಕೂಡ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.