ಮುಂಬೈ: ದಕ್ಷಿಣ ಆಫ್ರಿಕಾ ಟಿ20 ಸರಣಿಗೂ ಮುನ್ನವೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್ಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ 3 ಪಂದ್ಯಗಳು ಮುಕ್ತಾಯಗೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಕೆ.ಎಲ್.ರಾಹುಲ್ ನಾಯಕತ್ವ ವಹಿಸಬೇಕಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಅವರು ತೊಡೆ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದರು. ಆದ್ದರಿಂದ ಅವರ ಬದಲಿಗೆ ರಿಷಭ್ ಪಂತ್ ಅವರಿಗೆ ನಾಯಕನ ಪಟ್ಟ ನೀಡಲಾಯಿತು. ಪಂತ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ತಂಡ ಇದೀಗ 3 ಪಂದ್ಯಗಳಲ್ಲಿ 2ರಲ್ಲಿ ಸೋಲು ಕಂಡಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಟಿ20 ಸರಣಿ ದಕ್ಷಿಣ ಆಫ್ರಿಕಾ ಕೈವಶವಾಗಲಿದೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್ನಲ್ಲಿ ಯಾಕಿಲ್ಲ?
ಆದರೆ ರಾಹುಲ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇಂಗ್ಲೆಂಡ್ನಲ್ಲಿ ಜುಲೈ 1 ರಿಂದ 5ರ ವರೆಗೆ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡುವ ತಂಡವು ಮುಂಬೈನಿಂದ ಗುರುವಾರ ಬೆಳಗಿನ ಜಾವ ಲಂಡನ್ಗೆ ಪ್ರಯಾಣಿಸಲಿದೆ. ಈ ತಂಡದಲ್ಲಿ ರಿಷಭ್ ಪಂತ್ ಹೊರತುಪಡಿಸಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ ಸೇರಿ ಪ್ರಮುಖರಿದ್ದಾರೆ. ಈ ಬಳಗದೊಂದಿಗೆ ರಾಹುಲ್ ತೆರಳುತ್ತಿಲ್ಲ. ಅವರು ಇನ್ನಷ್ಟು ಕಾಲ ಇಲ್ಲಿ ಆರೈಕೆ ಪಡೆಯಬೇಕಿದೆ. ವಾರಾಂತ್ಯದಲ್ಲಿ ಫಿಟ್ನೆಸ್ ಪರೀಕ್ಷೆಗೊಳಪಟ್ಟ ನಂತರವಷ್ಟೇ ಅವರು ತೆರಳುವ ಕುರಿತು ನಿರ್ಧಾರವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.