ನವದೆಹಲಿ: 75 ನೇ ಸ್ವಾತಂತ್ರ್ಯ ದಿನಕ್ಕೂ ಮೊದಲೇ ದಾಳಿಯ ಆತಂಕ ಉಂಟಾಗಿದೆ. ದೆಹಲಿ ಪೊಲೀಸರು ಶುಕ್ರವಾರ ಆನಂದ್ ವಿಹಾರ್ ಪ್ರದೇಶದಲ್ಲಿ 2 ಚೀಲಗಳಲ್ಲಿ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಅದನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ 6 ಜನರನ್ನು ಬಂಧಿಸಿದ್ದಾರೆ.
ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಅದನ್ನು ಲಕ್ನೋಗೆ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ವಿಕ್ರಮಜಿತ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪ್ರಸ್ತುತ ಮೀರತ್ ಜೈಲಿನಲ್ಲಿರುವ ಅನಿಲ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಬಂಧಿತ 6 ಜನರಲ್ಲಿ ಒಬ್ಬ ಉತ್ತರಾಖಂಡದ ಡೆಹ್ರಾಡೂನ್ನಲ್ಲಿರುವ ಗನ್ ಹೌಸ್ ಮಾಲೀಕನೂ ಆಗಿದ್ದಾನೆ. ಇದರ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ವಿಕ್ಟೋರಿಯಾ ಸ್ಮಾರಕದ ಮೇಲೆ ಡ್ರೋನ್ ಹಾರಿಸಿದ ಆರೋಪದ ಮೇಲೆ ಪೊಲೀಸರು ಇಬ್ಬರು ಬಾಂಗ್ಲಾದೇಶೀ ಪ್ರಜೆಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ – ಅಧಿಕೃತ ಆದೇಶ
ವಿಕ್ಟೋರಿಯಾ ಮೆಮೊರಿಯಲ್ ಹಾಲ್ನ ಮೊದಲ ಮಹಡಿಯ ಬಾಲ್ಕನಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಡ್ರೋನ್ಗಳನ್ನು ಹಾರಿಸಿ, ಸುತ್ತಲಿನ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದು ಕಂಡುಬಂದಿದೆ. ಡ್ರೋನ್ ಹಾರಿಸಿದ ಕಾರಣ ಬಾಂಗ್ಲಾದೇಶದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ದೆಹಲಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕ ಗುಂಪುಗಳಿಂದ ದಾಳಿಯ ಬೆದರಿಕೆಗಳಿರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಬೆದರಿಕೆಯ ನಡುವೆ ಗುರುವಾರ ಹೈದರಾಬಾದ್ನಲ್ಲಿ ಭದ್ರತೆಗಳನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪಂಚಾಯತ್ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ