ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ಮಾಡುವ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ.
ಸರ್ವೇ ನಂಬರ್ 40, ಗುಟ್ಟಹಳ್ಳಿ, ಚಾಮರಾಜಪೇಟೆ ಬಡಾವಣೆ ಸ್ವತ್ತಿನ ಸಂಖ್ಯೆ 147ರ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರೆವೇರಿಸಲಾಗುವುದು ಎಂದು ಬೆಂಗಳೂರು ಉತ್ತರ ಉಪವಿಭಾಗದ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಚಾಮರಾಜಪೇಟೆ ಮೈದಾನವನ್ನು ಈದ್ಗಾ ಮೈದಾನ ಎಂದು ಸರ್ಕಾರ ಎಲ್ಲಿಯೂ ಉಲ್ಲೇಖಿಸಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ – ತಿರಂಗಾ ನಡೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ
ಪ್ರಸ್ತುತ ದಿನಗಳಲ್ಲಿ ಈದ್ಗಾ ಮೈದಾನ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಮೈದಾನ ತಮಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ವಾದಿಸುತ್ತಿದೆ. ಆದರೆ ಇದು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳುತ್ತಿದೆ.
ಈದ್ಗಾ ಮೈದಾನ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು, ಮೈದಾನದಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಟ್ಟು ಹಿಡಿದಿವೆ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆ ವೇಳೆಯೂ ಧ್ವಜಾರೋಹಣಕ್ಕೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಇತ್ತ ಮುಸ್ಲಿಮರು ಕೂಡ ನಾವು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಅವಕಾಶ ಕಲ್ಪಿಸಿದರೆ ಶಾಂತಿಭಂಗವಾಗುವ ಭೀತಿಯಿಂದಾಗಿ ಸರ್ಕಾರದ ನೇತೃತ್ವದಲ್ಲೇ ಧ್ವಜಾರೋಹಣ ನಡೆಸಲು ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ
ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.