ಚೆನ್ನೈ: ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ತಾರತಮ್ಯ ಎದುರಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ (ಟಿಎನ್ಯುಇಎಫ್) ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.
ತಮಿಳುನಾಡಿನ 24 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 386 ಪಂಚಾಯಿತಿಗಳಲ್ಲಿ ದಲಿತ ಸಮುದಾಯದವರು ಅಧ್ಯಕ್ಷರಾಗಿದ್ದು, ಆ ಪೈಕಿ 22 ಮಂದಿ ತಮ್ಮ ಕಚೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಪಂಚಾಯಿತಿಗಳಲ್ಲಿ ದಲಿತ ಪ್ರತಿನಿಧಿಗಳ ವಿರುದ್ಧ 17 ಬಗೆಯ ತಾರತಮ್ಯಗಳು ಚಾಲ್ತಿಯಲ್ಲಿವೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ
ಅನೇಕ ದಲಿತ ಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಹಕ್ಕನ್ನು ನಿರಾಕರಿಸಲಾಗಿದೆ. ಈ ತಾರತಮ್ಯವು ಕೆಲವೆಡೆ ಸ್ಥಳೀಯ ಸಂಸ್ಥೆಯ ಕಚೇರಿಗೆ ಪ್ರವೇಶವನ್ನು ನಿರಾಕರಿಸುವುದನ್ನೂ ಒಳಗೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.
ತಮಿಳುನಾಡು ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದು, ಸಾಮಾಜಿಕ ನ್ಯಾಯದ ಭೂಮಿ ಎನ್ನುವ ಮಾತು ಈ ಸಮೀಕ್ಷೆಯೊಂದಿಗೆ ಪ್ರಶ್ನಾರ್ಹವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ
ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಹೆಸರಿನ ಫಲಕಗಳನ್ನು ಪ್ರದರ್ಶಿಸಲಾಗಿಲ್ಲ. ಕೆಲವು ಪಂಚಾಯಿತಿಗಳಲ್ಲಿ ದಲಿತ ಅಧ್ಯಕ್ಷರಿಗೆ ಕುರ್ಚಿ ಮೇಲೆ ಕುಳಿತುಕೊಳ್ಳಲು ಅವಕಾಶವಿಲ್ಲ. ಇನ್ನು ಕೆಲವೆಡೆ ಅವರ ಕುರ್ಚಿಗಳನ್ನು ತೆಗೆಯಲಾಗಿದೆ. ಕೌನ್ಸಿಲ್ ಸಭೆಗಳಲ್ಲಿ ನಿರ್ಣಯಗಳನ್ನು ಅಂತಿಮಗೊಳಿಸಿ ಇತರ ಸದಸ್ಯರು ಅಂಗೀಕರಿಸಿದ ನಂತರ ಅದಕ್ಕೆ ದಲಿತ ಸಮುದಾಯದ ಅಧ್ಯಕ್ಷರ ಸಹಿಯನ್ನು ಪಡೆಯಲಾಗುತ್ತದೆ. ಅಕಸ್ಮಾತ್ ಪಂಚಾಯಿತಿಯ ದಲಿತ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದರೆ, ದಲಿತೇತರರು ಅದನ್ನು ಬಹಿಷ್ಕರಿಸುತ್ತಾರೆ.
ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಆಗಸ್ಟ್ 15 ರಂದು ಪಂಚಾಯತ್ ಅಧ್ಯಕ್ಷರು ರಾಷ್ಟ್ರಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸುವಂತೆ ಒತ್ತಾಯಿಸಲು ಟಿಎನ್ಯುಇಎಫ್ ಮುಂದಾಗಿದೆ.