ಲಕ್ನೋ: ಪ್ರೀತಿಸಿ ವಿದ್ಯಾರ್ಥಿನಿಯನ್ನು ಎರಡನೇ ಮದುವೆಯಾಗಿದ್ದ ಕೋಚಿಂಗ್ ಕ್ಲಾಸ್ನ ಶಿಕ್ಷಕನೊಬ್ಬ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕಲ್ಯಾಣ್ ನಗರದಲ್ಲಿ ಈ ಘಟನೆ ನಡೆದಿದ್ದು, ನಮ್ರತಾ ಖಾನ್(22) ಕೊಲೆಯಾದಾಕೆ. ಶಹವಾನ್(42) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಹವಾನ್ ಆತ್ಮಹತ್ಯೆಗೂ ಮುನ್ನ ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ತನ್ನ ಡೈರಿಯಲ್ಲಿ ಬರೆದಿದ್ದಾನೆ.
ಘಟನೆ ವಿವರ:
ಶಹವಾನ್ ಬಿಟೆಕ್ ಮುಗಿಸಿ ಕಾನ್ಪುರದಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದನು. ಇಲ್ಲಿಗೆ ಕೋಚಿಂಗ್ಗೆ ಬರುತ್ತಿದ್ದ ನಮ್ರತಾ ಖಾನ್ ವಿದ್ಯಾರ್ಥಿನಿ ಮೇಲೆ ಪ್ರೀತಿ ಹುಟ್ಟಿದ್ದು, ಕ್ರಮೇಣ ಪರಸ್ಪರ ಇಬ್ಬರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಕೆಲವು ದಿನಗಳ ಕಾಲ ಒಟ್ಟಿಗೆ ಇದ್ದು, ಬಳಿಕ ಮದುವೆಯಾಗಿದ್ದಾರೆ. ಮದುವೆಯಾದ ಆರಂಭದಲ್ಲಿ ಇಬ್ಬರು ತುಂಬಾ ಚೆನ್ನಾಗಿದ್ದರು. ಆದರೆ ದಿನ ಕಳೆದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಶಹಮಾನ್ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ತಿಳಿದು ಬಂದಿದೆ.
ನನ್ನ ಜೀವನಕ್ಕೆ 2016ರಲ್ಲಿ ನಮ್ರತಾ ಬಂದಳು. ಆಕೆಯನ್ನು ನಾನು ಮದುವೆಯಾದೆ. ನನಗೆ ಈಗಾಗಲೇ ಮದುವೆಯಾಗಿ, ಮಕ್ಕಳಿರುವ ಬಗ್ಗೆ ತಿಳಿಸಿದ್ದೆನು. ಆದರೂ ಆಕೆ ಒಪ್ಪಿ ನನ್ನ ಮದುವೆಯಾಗಿದ್ದಳು. ನಾನು ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಿದ್ದೆನು. ವಿವಾಹದ ಬಳಿಕ ನಮ್ರತಾ ನನಗೆ ತುಂಬಾ ಹಿಂಸೆ ಕೊಡುತ್ತಿದ್ದಳು. ನಾನು ಏನೇ ಹೇಳಿದರೂ ಕೇಳುತ್ತಿರಲಿಲ್ಲ. ಮಲಗಿದ್ದಾಗ ಕೆಟ್ಟದಾಗಿ ಬೈಯುತ್ತಿದ್ದಳು. ನನ್ನ ಮಗ ನಮ್ಮ ಜೊತೆಯೇ ವಾಸವಿದ್ದನು. ಆತನಿಗೆ ಪ್ರತಿದಿನ ಹೊಡೆಯುತ್ತಿದ್ದಳು. ನನ್ನಿಂದ ಆತನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು. ಇದರಿಂದ ನೊಂದಿದ್ದ ನನಗೆ ಜೀವನ ಸಾಕಾಗಿದೆ ಎಂದು ಶಹವಾನ್ ಡೈರಿಯಲ್ಲಿ ಬರೆದಿದ್ದಾನೆ.
ಪತ್ನಿಯ ನಡತೆಯಿಂದ ಬೇಸತ್ತಿದ್ದ ಶಹವಾನ್ ಕೊಲೆ ಮಾಡಲು ನಿರ್ಧರಿಸಿದ್ದು, ಅದರಂತೆಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆಗೆ ಫೋನ್ ಮಾಡಿ ನಾನು ನನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ. ಆಕೆಯ ಶವ ರೂಮ್ನಂಬರ್ 612 ರಲ್ಲಿದೆ ಎಂದು ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಶಹವಾನ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.
ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಲೆ ಮಾಡಿ ತಾನೂ ವಿಷ ಕುಡಿದು ಆತ್ಮಹತ್ಮೆ ಮಾಡಿಕೊಂಡಿದ್ದಾನೆ. ಆತ ಬರೆದಿರುವ ಡೈರಿಯಲ್ಲಿ ತನ್ನ ಸಾವಿನ ನಂತರ ಆಸ್ತಿಯನ್ನು ಮೊದಲ ಪತ್ನಿ ಹಾಗೂ ಮಕ್ಕಳಿಗೆ ನೀಡುವಂತೆ ತಿಳಿಸಿದ್ದಾನೆ. ಸದ್ಯಕ್ಕೆ ಆ ಡೈರಿಯನ್ನು ಕೈಬರಹ ತಜ್ಞರಿಗೆ ಪರಿಶೀಲನೆ ಮಾಡಲು ನೀಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.