ಹುಬ್ಬಳ್ಳಿ: ಪತಿ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಮಹಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿ ಉಣಕಲ್ ಸಾಯಿನಗರದಲ್ಲಿ ನಡೆದಿದೆ.
ಸವಿತಾ (ಮಧು) ನೇಣು ಬಿಗಿದುಕೊಂಡು ಮೃತಪಟ್ಟ ಗೃಹಿಣಿ. 1 ವರ್ಷ 5 ತಿಂಗಳ ಹಿಂದೆ ಸವಿತಾ, ಮಹೇಶ್ ಪಾಟೀಲ್ ಎಂಬಾತನನ್ನು ವರಿಸಿದ್ದಳು. ಆದರೆ ಮದುವೆಯ ನಂತರ ಮಹೇಶ್ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.
ಮಹೇಶ್ ಪಾಟೀಲ್ ಬೇರೆ ಮಹಿಳೆಯರೊಂದಿಗೆ ಮಾತನಾಡುವುದು ಹಾಗೂ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ಇಂದು ಸಾವಿಗೆ ಶರಣಾಗಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಮೃತಳ ಪೋಷಕರಾದ ಶಿವಬಾಯಿ ಹಾಗೂ ಬಸಲಿಂಗಪ್ಪ ಬೂದಿಹಾಳ ನೀಡಿರುವ ದೂರಿನ ಮೇರೆಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.