ಬೆಂಗಳೂರು: ಇದು ದರದ ಪ್ರಶ್ನೆ ಅಲ್ಲ. ಬೇರೆಯವರಿಗೆ ಮಾರುಕಟ್ಟೆ ಬಿಟ್ಟು ಕೊಟ್ಟಂತೆ ಎಂದು ಕೆಎಂಎಫ್ (KMF) ಮಾಜಿ ಅಧ್ಯಕ್ಷ ಸೋಮಶೇಖರ ರೆಡ್ಡಿ (Somashekara Reddy) ಪ್ರತಿಕ್ರಿಯಿಸಿದ್ದಾರೆ.
ತಿರುಪತಿ ಲಡ್ಡುಗೆ ನಂದಿನಿ ತುಪ್ಪದ ಟೆಂಡರ್ (No More Nandini Ghee for Tirupati Laddus) ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಂದಿನಿ ತುಪ್ಪ ತಿರುಪತಿ ದೇವರ ಸಂಬಂಧ ಅವಿನಾಭಾವ. ಸರಬರಾಜು ನಿಲ್ಲಿಸಿದರೆ ರೈತರಿಗೆ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ ನಂದಿನಿಯ ಅಂತರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಸಮಸ್ಯೆಯಾಗಲಿದೆ ಎಂದರು. ಇದನ್ನೂ ಓದಿ: ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ
ಈ ಹಿಂದೆ ಒಂದು ಬಾರಿ ಟಿಟಿಡಿಯವರು (TTD) ದರ ಕಡಿಮೆ ಎಂದು ಬೇರೆ ಬ್ರ್ಯಾಂಡ್ ತುಪ್ಪ ಬಳಸಿದ್ದರು. ಆದರೆ ಗುಣಮಟ್ಟ ಕಡಿಮೆ ಎಂದು ಅವರಿಗೆ ಅನಿಸಿತು. ಆಮೇಲೆ ನಾನೇ ಖುದ್ದು ನಮ್ಮ ನಂದಿನಿ ತುಪ್ಪ ತೆಗೆದುಕೊಳ್ಳುವಂತೆ ಮನವೊಲಿಸಿದ್ದೆ ಎಂದು ತಿಳಿಸಿದರು.
ಟಿಟಿಡಿಯರಿಗೆ ನಾವು ಮಾರುಕಟ್ಟೆ ದರಕ್ಕಿಂತ ಎರಡು ರೂಪಾಯಿ ಕಡಿಮೆಗೆ ಕೊಡುತ್ತಿದ್ದೆವು. ದಯವಿಟ್ಟು ಕೆಎಂಎಫ್ ಈ ಟೆಂಡರ್ ಅನ್ನು ಬಿಡಬಾರದು. ನಾನು ಖುದ್ದು ಭೀಮಾ ನಾಯ್ಕ್ (Bhima Nayak) ಜೊತೆ ಮಾತನಾಡುತ್ತೇನೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನಂದಿನಿ ತುಪ್ಪ ಕಳುಹಿಸಬೇಕು ಎಂದರು.
ಸುಮಾರು 50 ವರ್ಷಗಳ ಬಳಿಕ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಕೆಎಂಎಫ್ನಿಂದ ನಂದಿನಿ ತುಪ್ಪದ ಖರೀದಿಯನ್ನು ಸ್ಥಗಿತ ಮಾಡಿದೆ. ಇದರಿಂದಾಗಿ ವಿಶ್ವ ಪ್ರಸಿದ್ಧ ಲಾಡುಗಳಲ್ಲಿ ಇನ್ನು ಮುಂದೆ ನಂದಿನಿ ತುಪ್ಪದ ಘಮ ಇರುವುದಿಲ್ಲ. ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ್, ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಮಲ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್ನಿಂದ ಕೆಎಂಎಫ್ ದೂರ ಉಳಿದಿದೆ ಎಂದಿದ್ದಾರೆ.
ಆರು ತಿಂಗಳಿಗೆ 14 ಲಕ್ಷ ಕೆಜಿ ತುಪ್ಪ ನಂದಿನಿಯಿಂದ ಸರಬರಾಜು ಆಗುತ್ತಿತ್ತು. ಈ ಹಿಂದೆ ರಿಯಾಯಿತಿ ದರದಲ್ಲಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಹೋಗುತ್ತಿತ್ತು. ಆದರೆ ಈಗ ಕೆಎಂಎಫ್ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತಪ್ಪದ ದರವನ್ನು ಏರಿಸಿತ್ತು. ದರದ ಗೊಂದಲದಿಂದ ಟೆಂಡರ್ನಲ್ಲಿ ಕೆಎಂಎಫ್ ಭಾಗವಹಿಸರಲಿಲ್ಲ
Web Stories