ರಾಯಚೂರು: ಕರ್ನಾಟಕ ಬಂದ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೆಲವರು ಸಮಯ ಬಂದಾಗ ವರದಿಗಳ ಬಗ್ಗೆ ಹೇಳಿಕೊಂಡು ತಿರುಗುತ್ತಾರೆ. ಕರ್ನಾಟಕ ಬಂದ್ಗೆ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಡಾ. ಸರೋಜಿನಿ ಮಹಿಷಿ, ನಂಜುಂಡಪ್ಪ ವರದಿ 40 ವರ್ಷಗಳಿಂದ ಚರ್ಚೆಯಲ್ಲಿವೆ. ವರದಿಗಳ ಬಗ್ಗೆ ವಿಶ್ಲೇಷಣೆ ಮಾಡಿ ತಿಳಿದುಕೊಳ್ಳಬೇಕು. ಪ್ರತಿಯೊಂದಕ್ಕೂ ಬಂದ್ ಅಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿ, ಬಿಜೆಪಿ ಮೂರು ವರ್ಷ ಪೂರೈಸಲಿ ಅವರೇ ಸಿಎಂ ಆಗಿ ಕೆಲಸ ಮಾಡಲು ನನ್ನ ವಿರೋಧವಿಲ್ಲ ಎಂದರು. ಬಿಜೆಪಿ ಬಂದ ಮೇಲೆ ಭಷ್ಟಾಚಾರ ಹೆಚ್ಚಾಗಿದೆ ಎಂದು ಅವರೇ ಹೇಳಿದ್ದಾರೆ ನಾನು ಹೇಳಿಲ್ಲ. ಮುಚ್ಚುಮರೆಯಿಲ್ಲದೆ ಬಿಜೆಪಿ ಹೇಳಿಕೊಳ್ಳುತ್ತಿದೆ ಅದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ಅವರ ಪಕ್ಷದವರೇ ಭ್ರಷ್ಟಚಾರದ ಬಗ್ಗೆ ಹೈಕಮಾಂಡಗೆ ದೂರು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೆಹಲಿಯಲ್ಲಿ ಶೇಕಡಾವಾರು ಮತದಾನ ಬಿಜೆಪಿಗೆ ಕಡಿಮೆಯಾಗಿದೆ. ದೆಹಲಿ ಫಲಿತಾಂಶ ಕಾಂಗ್ರೆಸ್, ಬಿಜೆಪಿಗೆ ಒಂದು ಪಾಠ ಎಂದು ಕಿಡಿಕಾರಿದರು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಕಷ್ಟ ಇದೆ. ತಮಿಳುನಾಡು, ಕೇರಳದಲ್ಲಿ ಕಷ್ಟವಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ಥಿತ್ವ ಇಲ್ಲ ಎಂದು ಹೇಳಿದರು.
ರಾಜಕೀಯ ವಾಸ್ತವಾಂಶಗಳ ಪುಸ್ತಕ ಬಿಡುಗಡೆ ಮಾಡುತ್ತೇನೆ. ಪುಸ್ತಕದಲ್ಲಿ ರಾಜಕೀಯ ವಿಚಾರಗಳು ಎಲ್ಲವೂ ಇವೆ. ಒಂದೂವರೆ ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗುತ್ತೆ. ಕೇಂದ್ರ ಸರ್ಕಾರ ನೀರಾವರಿ ಯೋಜನೆಗೆ ಮಹತ್ವ ಕೊಟ್ಟಿಲ್ಲ. ಮೋದಿ ಅವರ ಸ್ವಭಾವ ಬೇರೆಯಿದೆ ನಾನು ಯಾರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಲ್ಲ ಎಂದು ಎಚ್ಡಿಡಿ ಕಿಡಿಕಾರಿದರು.