ಬೆಂಗಳೂರು/ನೆಲಮಂಗಲ: ಸುಮಾರು 1980 ರಲ್ಲಿ ನಿರ್ಮಾಣವಾದ ಸಣ್ಣ ನೀರಾವರಿ ಕೆರೆ ಇಂದು ಪ್ರವಾಸಿಗರ ನೆಚ್ಚಿನ ತಾಣ, ಜೊತೆಗೆ ಹಲವಾರು ಮುಖಂಡರು ಸೇರಿ ತುಂಬಿದ ಕೆರೆಗೆ ಪಕ್ಷಾತೀತವಾಗಿ ಬಾಗಿನ ಸಮರ್ಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಹೋಬಳಿಯ ಹಳೇನಿಜಗಲ್ ಕೆರೆಗೆ ತುಮಕೂರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಾಗಿನ ಅರ್ಪಿಸಿದರು, ಬಳಿಕ ಇದೇ ವೇಳೆ ಮಾತನಾಡಿದ ಅವರು, ಕಲ್ಲಿನ ಬಂಡೆಗಳ ನಡುವೆ ಬೆಟ್ಟದಿಂದ ಬರುವ ನೀರು ಕೆರೆಗೆ ಆಧಾರವಾಗಿದ್ದು, ಸುಮಾರು 50 ಎಕರೆ ಒಳಗೊಂಡಿದೆ. ಇಂದಿನ ಯುವ ಜನತೆ ವ್ಯಸನಗಳಿಗೆ ದಾಸರಾಗಬಾರದು. ಪೋಷಕರು ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ಮುಕ್ತವಾಗಿ ಬಿಡಬೇಕು. ಆದರೆ ಯುವಕರು ಮೈಸೂರಿನಲ್ಲಿ ಆದ ದುರ್ಘಟನೆಯಿಂದ ದೂರ ಇರಬೇಕು. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಬೇಕು ಎಂದಿದ್ದಾರೆ. ಇದನ್ನೂ ಓದಿ:ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ
ನಂತರ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಕೆರೆಯ ಬಗ್ಗೆ ಮಾತನಾಡಿ, ಈ ಕೆರೆ ಉದ್ದಾನ ವೀರಭದ್ರಸ್ವಾಮಿ ತಪೋಗೈದ ಭೂಮಿಯಾಗಿದೆ. ಯಡಿಯೂರು ಸಿದ್ದಲಿಂಗೇಶ್ವರರ ವರಪ್ರಸಾದವಾಗಿದ್ದು, ಕೋಡಿ ಬಸವಣ್ಣ ಎಂದೇ ಹೆಸರಾಗಿದೆ. ಕೆರೆ ಪ್ರತಿ ವರ್ಷ ನೆಲಮಂಗಲ ತಾಲೂಕಿನಲ್ಲೇ ಮೊದಲ ಕೆರೆಯಾಗಿ ತುಂಬುತ್ತಿದೆ, ಈ ಕೆರೆ ನೋಡಲು ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಪ್ರವಾಸಿಗರು ಮೈಮರೆತು, ಸೆಲ್ಫಿ ಕ್ರೇಜ್ ನಿಂದ ನಾಲ್ಕು ಮಂದಿ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಕೆರೆಗೆ ಸುತ್ತಲು ತಂತಿಬೇಲಿ ಹಾಕಬೇಕು, ರಸ್ತೆ ಮಾಡಬೇಕು ಎಂಬ ಒತ್ತಾಯವನ್ನು ಇಲಾಖೆ ಮತ್ತು ವಿಧಾನಮಂಡಲದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಅಪಘಾತ -ಯುವಕ ಸಾವು
ಈ ವೇಳೆಯಲ್ಲಿ ಅಗಳಕುಪ್ಪೆ ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಕಲಾ ಶ್ರೀನಿವಾಸ್, ಸದಸ್ಯರಾದ ಶೋಭಾ ಗಂಗರಾಜು, ಚೈತ್ರ ಮಹೇಶ್, ಮುಖಂಡರಾದ ಮೋಹನ್ ಕುಮಾರ್, ಮಾಚನಹಳ್ಳಿ ಜಯಣ್ಣ, ಊರಿನ ಮುಖಂಡರಾದ ರವಿಕುಮಾರ್, ಕೆಂಪಣ್ಣ, ಕರವೇ ಮಂಜುನಾಥ್, ಇನ್ನಿತರು ಉಪಸ್ಥಿತರಿದ್ದರು.