ಧಾರವಾಡ: ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ಬಜೆಟ್ ವಿಶ್ಲೇಷಣೆ ಮಾಡಬೇಕಿದೆ ಎಂದು ಹೇಳಿರುವ ಮಾಜಿ ಸಚಿವ ಎಚ್.ವಿಶ್ವನಾಥ್, ಸಚಿವ ಶ್ರೀರಾಮುಲು ಪುತ್ರಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರನ ಆಡಂಬರದ ಮದುವೆಯ ಬಗ್ಗೆ ಕೊಂಕು ಮಾತನಾಡಿದ್ದಾರೆ.
ನಗರದ ಸಾಧನಕೆರೆಯ ಬೇಂದ್ರೆ ಭವನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರದ ವಿಚಾರಗಳನ್ನು ಸತ್ಯದ ರೂಪದಲ್ಲಿ ಹೇಳಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎನ್ನುತ್ತ ಆಡಂಬರದ ಮದುವೆ ಪ್ರಸ್ತಾಪ ಮಾಡಿದರು. ಬಜೆಟ್ ಮಂಡನೆ ದಿನವೇ ಶ್ರೀರಾಮುಲು ಮನೆ ಮದುವೆ ಆಯಿತು. 7 ದಿನದ ಮದುವೆ, ಬಳ್ಳಾರಿಯಿಂದ ಹಿಡಿದು ಬೆಂಗಳೂರವರೆಗಿನ ಮದುವೆಯಾಗಿದೆ ಎಂದರು.
ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆಗಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್ ಎಂಗೇಜ್ಮೆಂಟ್ಗೆ ಬೇರೆ ದೇಶದಿಂದ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್ ಎಂಗೇಜ್ಮೆಂಟ್ಗೆ ಬೇರೆ ದೇಶದ ಹಾರವೇ ಬೇಕಾಗಿತ್ತಾ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.
ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೀನಿ ಎಂದು ಎಚ್ಡಿಕೆ ಹೇಳುತ್ತಿದ್ದಾರೆ. ಜನ ಅವಕಾಶ ಕೊಟ್ಟಾಗ ಸಿಎಂ ಆಗಿದ್ರಲ್ವಾ ಆಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಅರ್ಥಿಕ ಬಲ ಮಾಡಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಬಜೆಟ್ ಬಗ್ಗೆ ಮಾತು:
ಬಜೆಟ್ ಪ್ರಸ್ತಾಪ ಮಾಡಿದ ವಿಶ್ವನಾಥ್, ಎರಡೂವರೆ ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದರೂ 4 ಲಕ್ಷ ಕೋಟಿ ರೂ. ಹತ್ತಿರಕ್ಕೆ ಸಾಲ ತಂದಿದ್ದೇವೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ ಎಂಬ ಬಗ್ಗೆ ವಿಚಾರ ಮಾಡಬೇಕಿದೆ ಎಂದರು.
ಅಧಿಕಾರಿಗಳ, ನೌಕರರ ಸಂಬಳಕ್ಕೆ 24 ಸಾವಿರ ಕೋಟಿ ರೂ. ಹೋಗುತ್ತಿದೆ. ನನ್ನ ಹತ್ತಿರ ಇರುವುದೇ ಹತ್ತು ರೂಪಾಯಿ ಅಂತ ಹೇಳುವ ನಾಯಕರು ಬೇಕಿದೆ. ದೆಹಲಿ ಸಿಎಂ ಬಸ್, ವಿದ್ಯುತ್, ನೀರು ಎಲ್ಲ ಉಚಿತ ಕೊಟ್ಟಿದ್ದಾರೆ. ಇಂತಹ ಕೆಲಸಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರ ಗಮನಹರಿಸಬೇಕು. ಹೀಗಾಗಿ ದುಂದು ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರ ಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು.
ತಾವು ಪಕ್ಷ ಬದಲಿಸಿದ್ದು ಮಾರಾಟವಲ್ಲ. ಹೋರಾಟ ಎಂದ ವಿಶ್ವನಾಥ್, ರಾಜ್ಯದಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿ ಬಹಳ ದಿನವಾಯಿತು. ಇಲ್ಲಿ ಕುಟುಂಬ, ವ್ಯಕ್ತಿ ಜಾತಿ, ಗುಂಪು ರಾಜಕಾರಣ ಆಗುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮನ್ನೆಲ್ಲ ಮಾರಾಟ ಅಂದ್ರು. ಆದರೆ ಅದು ಅವರ ದುರ್ನಡತೆ ವಿರುದ್ಧ ನಡೆದ ಹೋರಾಟ. ನಾನು ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಿದವನಲ್ಲ, ಸಚಿವ ಸ್ಥಾನ ಕೊಡುವುದು ಬಿಡುವುದು ಬಿಎಸ್ವೈಗೆ ಬಿಟ್ಟಿದ್ದು, ಸೋತವರಿಗೆ ಕೊಡಬಾರದು ಅಂತಿಲ್ಲ, ಈಗ ಸೋತವರೇ ಡಿಸಿಎಂ ಆಗಿದ್ದಾರೆ. ಕನ್ನಡ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ಏಕೈಕ ನಾಯಕ ಯಡಿಯೂರಪ್ಪ ಮಾತ್ರ. ಕುಮಾರಸ್ವಾಮಿ ಎಂದಿಗೂ ಇಲ್ಲ. ಯಡಿಯೂರಪ್ಪ ಬಗ್ಗೆ ಮಾತ್ರ ನಮಗೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.