ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡರು ಮತ್ತೊಮ್ಮೆ ಬೆಳಗಾವಿಯಲ್ಲಿ ತಮ್ಮ ನಾಡದ್ರೋಹಿ ಬುದ್ಧಿ ಪ್ರದರ್ಶಿಸಿದ್ದಾರೆ.
ಬೆಳಗಾವಿಯಲ್ಲಿ(Belagavi) ಕರ್ನಾಟಕ ಸರ್ಕಾರದ ‘ಕನ್ನಡ ಕಡ್ಡಾಯ’ ಆದೇಶವನ್ನು ವಿರೋಧಿಸಿ ಜಿಲ್ಲಾಧಿಕಾರಿ (DC) ಕಚೇರಿ ಆವರಣದಲ್ಲೇ ಜಮಾಯಿಸಿದ ಎಂಇಎಸ್ ಕಾರ್ಯಕರ್ತರು, ಪೊಲೀಸರ ಸಮ್ಮುಖದಲ್ಲೇ ಸರ್ಕಾರದ ಅಧಿಕೃತ ಆದೇಶದ ಪ್ರತಿಯನ್ನು ಹರಿದು ಹಾಕಿ ತೀವ್ರ ಉದ್ಧಟತನ ಮೆರೆದಿದ್ದಾರೆ.
ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಕ್ಯಾತೆ ತೆಗೆದ ಎಂಇಎಸ್ ಪುಂಡರು, “ಕರ್ನಾಟಕ ಸರ್ಕಾರದ ದಾದಾಗಿರಿ ನಡೆಯುವುದಿಲ್ಲ” ಎಂದು ಕೂಗಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, “ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು” ಎಂದು ಡಿಸಿ ಕಚೇರಿ ಆವರಣದಲ್ಲೇ ನಾಡದ್ರೋಹಿ ಘೋಷಣೆಗಳನ್ನು ಕೂಗಿ ಆಟಾಟೋಪ ಮೆರೆದಿದ್ದಾರೆ. ಅಲ್ಲದೆ ಗಡಿ ಭಾಗದಲ್ಲಿ ಮರಾಠಿ ಭಾಷೆಯಲ್ಲೇ ನಾಮಫಲಕಗಳನ್ನು ಹಾಕಬೇಕು ಹಾಗೂ ಪ್ರತಿಯೊಂದು ಸರ್ಕಾರಿ ದಾಖಲೆಗಳನ್ನು ಮರಾಠಿಯಲ್ಲೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಎಂಇಎಸ್ ಕಾರ್ಯಕರ್ತರ ಈ ವರ್ತನೆಗೆ ಕನ್ನಡಿಗರು ಕೆಂಡಾಮಂಡಲವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ತಕ್ಷಣವೇ ಬೀದಿಗಿಳಿದು ಆಕ್ರೋಶ ಹೊರಹಾಕಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿಯ ವೀರಭದ್ರೇಶ್ವರ ಕ್ರಾಸ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದನ್ನೂ ಓದಿ: 51 ವರ್ಷಗಳಿಂದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನ ಮತ್ತೆ ಗೋಚರ!
ಕನ್ನಡಿಗರನ್ನು ಕೆಣಕುತ್ತಾ, ಭಾಷಾ ಗಲಭೆಗೆ ಪ್ರಚೋದನೆ ನೀಡುತ್ತಿರುವ ಎಂಇಎಸ್ನ ಮುಖ್ಯ ನಾಯಕರನ್ನು ತಕ್ಷಣವೇ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದೆ.
