ಬೆಂಗಳೂರು: ಕೋವಿಡ್ ಬಗ್ಗೆ ಸರ್ಕಾರ ಉಪೇಕ್ಷೆ ಮಾಡಬಾರದು. ನಿನ್ನೆ ಒಂದೇ ದಿನ 41 ಸಾವಿರ ಪ್ರಕರಣಗಳು ವರದಿಯಾಗಿದೆ. ಇದು ಎಚ್ಚರಿಕೆಯ ಕರೆಗಂಟೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ ಮತ್ತು ಅವರ ಜೀವನ ನೋಡಿಕೊಂಡು ಸರ್ಕಾರ ಕ್ರಮವಹಿಸಬೇಕು ಎಂದರು. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸೋದಾದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು: ಪ್ರತಾಪ್ ಸಿಂಹ
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಚಾರದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸರ್ಕಾರ ನಡೆಸುವ ಪಕ್ಷದಲ್ಲೇ ಈ ಬಗ್ಗೆ ಸಹಮತ ಇಲ್ಲ. ಅವರೇ ಗೊಂದಲದಲ್ಲಿ ಇದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ? ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯ ಪ್ರಮುಖರೇ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರ ದಾರಿ ತಪ್ಪಿಸುತ್ತಿದೆ:
ದೇಶದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರ ಕೋರ್ಟ್ ಮುಂದೆ ನಿನ್ನೆ ಹೇಳಿದೆ. ಎರಡು ಹೊತ್ತಿನ ಊಟ ಇಲ್ಲದೆ ಸಾಯುವವರೂ ಇದ್ದಾರೆ. ಜನ ಎಷ್ಟು ಕಷ್ಟದಲ್ಲಿ ಇದ್ದಾರೆ ಎನ್ನುವುದನ್ನು ಸರ್ಕಾರ ನೋಡಬೇಕು. ಸೋಂಕಿನ ಕಾರಣದಿಂದ ಜನ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿಜ ಸ್ಥಿತಿ ಹೀಗಿರುವಾಗ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಪಪ್ರಚಾರ ಮಾಡದೇ ಇದ್ದಿದ್ದರೆ ಭಾರತ ಮತ್ತಷ್ಟು ಸಾಧನೆ ಮಾಡುತ್ತಿತ್ತು: ಬಿಜೆಪಿ ತಿರುಗೇಟು
ಜನರಿಗೆ ಸಂಕಷ್ಟದ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲ ಸರ್ಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ವಿರೋಧ ಪಕ್ಷಗಳು ಹೇಳುತ್ತವೆ ಎಂದು ಸರ್ಕಾರ ಮಾಡದೇ ಇರಬಾರದು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರ್ಕಾರ ಇರುವುದು ಏತಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಒಂದು ಕಡೆ ಸೋಂಕನ್ನು ನಿಯಂತ್ರಣ ಮಾಡಬೇಕು. ಅದರ ಜೊತೆಯಲ್ಲೇ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಬೇಕು. ಜೀವ ಉಳಿಯಬೇಕು, ಜೀವನವೂ ನಡೆಯಬೇಕು. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ಕೆಲಸ ಮಾಡಿ ಜನರು ಜೀವನ ನಡೆಸುತ್ತಿದ್ದಾರೆ. ಅವರಿಗೆ ತೊಂದರೆ ಆಗುತ್ತದೆ ಎಂಬುದನ್ನು ಸರ್ಕಾರ ಗಮನಿಸಬೇಕು. ತಜ್ಞರ ವರದಿ ಹಾಗೂ ಪರ-ವಿರೋಧಗಳನ್ನು ನೋಡಬೇಕಾಗುತ್ತದೆ. ಇದನ್ನೆಲ್ಲ ತಿಳಿದುಕೊಂಡು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.
ಫೆಬ್ರವರಿಯಲ್ಲಿ ಜನರಿಗೆ ಜಲಧಾರೆ ಮಾಹಿತಿ:
ಕೋವಿಡ್ ಕಾರಣದಿಂದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸೋಂಕಿನ ಪರಿಸ್ಥಿತಿಯನ್ನು ನೋಡಿಕೊಂಡು ಜಲಧಾರೆಯ ಹೊಸ ವೇಳಾಪಟ್ಟಿಯನ್ನು ಪ್ರಕಟ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನಲ್ಲ: ಕೆ.ಎಸ್ ಈಶ್ವರಪ್ಪ
ಪಕ್ಷದಲ್ಲಿ ಕೆಲವು ಪ್ರಮುಖರ ಸಭೆ ಕರೆದಿದ್ದೇನೆ. ಪಕ್ಷ ಸಂಘಟನೆ ಕುರಿತು ಸಭೆ ನಡೆಯಲಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು. ಜಲಧಾರೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜಲಧಾರೆಯ ಕಳಶ ವಾಹನ, ಯಾವ ಮಾರ್ಗ, ಜಲ ಸಂಗ್ರಹ ಇತ್ಯಾದಿ ಅಂಶಗಳ ಬಗ್ಗೆ ಮುಖಂಡರಿಗೆ ಮಾಹಿತಿ ನೀಡಿದ್ದೇವೆ. ಕೆಲ ಜಿಲ್ಲೆಗಳ ಮುಖಂಡರು ಗಂಗಾ ರಥಗಳು ಹೆಚ್ಚು ಸಮಯ ತಮ್ಮ ಭಾಗದಲ್ಲಿ ಸಂಚಾರ ಮಾಡಬೇಕು ಎಂದು ಕೇಳಿದ್ದಾರೆ. ಆ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಮನೆ ಬಾಗಿಲಿಗೆ ಜಲಧಾರೆ ಮಾಹಿತಿ:
ಜಲಧಾರೆ ಕಾರ್ಯಕ್ರಮವನ್ನು ನಮ್ಮ ಪಕ್ಷ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ. ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಫೆಬ್ರವರಿ ಮೊದಲ ವಾರದಿಂದ ಜಲಧಾರೆ ಮಾಹಿತಿ ಜನರ ಮುಂದೆ ಇಡುತ್ತೇವೆ. ಹ್ಯಾಂಡ್ ಬಿಲ್ಗಳನ್ನು ನೀಡಲಾಗುತ್ತದೆ. ಜತೆಗೆ ಬೇರೆ ಬೇರೆ ನಮೂನೆಗಳಲ್ಲಿ ಮಾಹಿತಿ ಕೊಡುತ್ತೇವೆ. ಜನರ ವಿಶ್ವಾಸಗಳಿಸಿ ಅವರ ಬೆಂಬಲದೊಂದಿಗೆ ಜಲಧಾರೆ ಕಾರ್ಯಕ್ರಮ ಮಾಡುತ್ತೇವೆ ಎಂದರು.