ಬೆಂಗಳೂರು: ಎಲ್ಲ ಧರ್ಮಗಳೂ ಮಾನವೀಯತೆ ಸಾರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಹಜ್ ಭವನದಲ್ಲಿ ನಡೆದ ಹಜ್ಯಾತ್ರೆ-2022ರ ಮೊದಲ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಜ್ಗೆ ಹೋಗಿ ಬಂದ ನಂತರ ಹಾಜಿಯಾಗಿ ಕಟ್ಟುನಿಟ್ಟಿನ ಬದುಕು ನಡೆಸಬೇಕು. ಅತ್ಯಂತ ಶುದ್ಧ ಬದುಕನ್ನು ನಡೆಸಬೇಕು. ಆಗ ಅಲ್ಲಿಗೆ ಹೋಗಿ ಬಂದಿದ್ದಕ್ಕೂ ಸಾರ್ಥಕವಾಗುತ್ತದೆ. ನಿಮ್ಮ ದುವಾ ಪೂರ್ಣವಾಗಬೇಕಾದರೆ ಒಳ್ಳೆಯತನದಿಂದ ನಡೆದುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿಲಬಸ್ ವಾರ್: ಸಿದ್ದಗಂಗಾ ಮಠದ ಬಗ್ಗೆಯೂ ಕತ್ತರಿ, ಅನ್ನ ದಾಸೋಹ-ಅಕ್ಷರ ದಾಸೋಹ ವಾಕ್ಯ ಕಟ್
ಕೆಲವರು ಮಾತ್ರ ಮನುಷ್ಯತ್ವದಿಂದ ನಡೆದುಕೊಂಡು ದೇವಮಾನವರಾಗುತ್ತಾರೆ. ಬದುಕಿನಲ್ಲಿ ಏನಾದರೂ ಪ್ರಾಪ್ತಿಯಾಗಬೇಕಾದರೆ ಒಳ್ಳೆಯ ಗುಣಗಳು ಮತ್ತು ಆಚಾರ-ವಿಚಾರಗಳಿಂದ ಮಾತ್ರ ಸಾಧ್ಯ. ಎಲ್ಲಿ ಒಳ್ಳೆತನವಿದೆಯೋ ಅಲ್ಲಿ ಭಗವಂತನಿರುತ್ತಾನೆ ಎಂದು ನುಡಿದಿದ್ದಾರೆ.
ಭಗವಂತನಿಗೆ ಪ್ರಿಯವಾಗುವಂತೆ ಬದುಕಬೇಕು: ಪ್ರತಿ ಮನುಷ್ಯನಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ನಮ್ಮಲ್ಲಿರುವ ಯಾವ ಗುಣ ಅಂತಿಮವಾಗಿ ಜಯಶಾಲಿಯಾಗುತ್ತದೆ ಎನ್ನುವುದು ನಮ್ಮ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಮಾನವೀಯತೆಯ ಆಧಾರದ ಮೇಲೆ ನಡೆದುಕೊಂಡಾಗ ಭಗವಂತನಿಗೆ ಅತ್ಯಂತ ಪ್ರಿಯವಾಗುತ್ತದೆ. ಭಗವಂತನಿಗೆ ಪ್ರೀತಿಯಾಗಿರುವ ಬದುಕನ್ನು ನಾವು ಬದುಕಬೇಕು. ಇದೇ ಎಲ್ಲಾ ಧರ್ಮಗಳ ಸಾರವಾಗಿದ್ದು, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಿದಾಗ ಇದು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿ ಹಬ್ಬ – ಉದ್ಘಾಟನೆಗೆ ಪ್ರಧಾನಿ ಆಹ್ವಾನ: ಅಶ್ವಥ್ ನಾರಾಯಣ
ಹಜ್ ಭವನ ಅಭಿವೃದ್ಧಿಗೆ ಸರ್ಕಾರ ಸಹಕಾರ: ದೇವರ ದರ್ಶನ ಉತ್ತಮವಾಗಿ ಆಗಿ, ಮನೋಕಾಮನೆ ಪೂರ್ತಿಯಾಗಲಿ. ತಮ್ಮ ದುವಾ ಅಲ್ಲಾಹುವಿಗೆ ಮುಟ್ಟಿ ಇಡೀ ಭಾರತ, ವಿಶ್ವಕ್ಕೆ ಒಳ್ಳೆಯದಾಗಲಿ. ಹಜ್ಗೆ ಹೋಗುವವರೆಲ್ಲರೂ ನಾಡು ಸುಭಿಕ್ಷವಾಗಲಿ, ಅಭಿವೃದ್ಧಿಶೀಲವಾಗಲಿ ಎಂದು ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದ ಸಿಎಂ, ದೇಶದಲ್ಲಿಯೇ ಅತ್ಯುತ್ತಮವಾಗಿರುವ ಹಜ್ ಭವನ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಇದರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಸಮಾರಂಭದಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಫಿ ಸಅದಿ, ಹಜ್ ಕಮಿಟಿ ಅಧ್ಯಕ್ಷ ರವುಫ ಉದ್ದೀನ್ ಕಚೇರೆವಾಲೆ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಸಂಸದ ನಾಸೀರ್ ಹುಸೇನ್, ಮಾಜಿ ಸಚಿವರಾದ ಯು.ಟಿ.ಖಾದರ್, ರೋಷನ್ ಬೇಗ್, ಹಜ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.