ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ(ಬಿಟಿಎಸ್)ಯ 25ನೇ ವರ್ಷದ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ(ಜಿಐಎ) ರಾಷ್ಟ್ರಗಳ ಕಾನ್ಸುಲ್ ಜನರಲ್, ಡೆಪ್ಯುಟಿ ಕಾನ್ಸುಲ್ ಜನರಲ್ ಮತ್ತು ಗೌರವ ಕಾನ್ಸುಲ್ ಜನರಲ್ ಗಳೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಬುಧವಾರ ಸಮಾಲೋಚನೆ ನಡೆಸಿದರು.
ಬಿಟಿಎಸ್-25ರ ಭಾಗವಾಗಿರುವ ಜಾಗತಿಕ ನಾವೀನ್ಯತಾ ಸಹಭಾಗಿ(ಜಿಐಎ) ದೇಶಗಳನ್ನು ಆಹ್ವಾನಿಸಲು ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟಿಎಸ್-25 ಸಮಾವೇಶದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ರಾಜ್ಯವು ಈಗಾಗಲೇ 30ಕ್ಕೂ ಹೆಚ್ಚು ಜಿಐಎ ಸಹಭಾಗಿಗಳನ್ನು ಹೊಂದಿದ್ದು, 50ಕ್ಕೂ ಹೆಚ್ಚು ಮಹತ್ವದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಇದನ್ನೂ ಓದಿ: 10 ತಿಂಗಳ ಹಸುಳೆಯನ್ನು ಅಪಹರಿಸಿದ ಮಹಿಳೆ – 24 ಗಂಟೆಯಲ್ಲಿ ಪೊಲೀಸರ ಅತಿಥಿ
ಮುಖ್ಯವಾಗಿ ಅಗ್ರಿಟೆಕ್, ಫಿನ್ಟೆಕ್, ಮೆಡ್-ಟೆಕ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ) ಕ್ಷೇತ್ರಗಳಲ್ಲಿ ನಾವೀನ್ಯತಾ ಸಹಭಾಗಿತ್ವದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶವು ಟೆಕ್4ನೆಕ್ಸ್-ಜೆನ್ ಘೋಷವಾಕ್ಯದೊಂದಿಗೆ ನ.16, 17 ಮತ್ತು 18ರಂದು ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, 48ಕ್ಕೂ ಹೆಚ್ವು ದೇಶಗಳು ಪಾಲ್ಗೊಳ್ಳಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಈಗಾಗಲೇ 40 ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಇವೆ. ಇನ್ನೂ ಹೆಚ್ಚಿನ ಕಂಪನಿಗಳ ಇಂತಹ ಕೇಂದ್ರಗಳು ಇಲ್ಲಿ ಆರಂಭಗೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯವು ಸ್ಟಾರ್ಟಪ್ ಕರ್ನಾಟಕ, ಇನ್ನೊವೇಟ್ ಕರ್ನಾಟಕ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ ತರಹದ ಉಪಕ್ರಮಗಳನ್ನು ಕೈಗೊಂಡಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಸುಸ್ಥಿರತೆ, ಕೈಗೆಟುಕುವಿಕೆ, ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಮಾಲಿನ್ಯ ರಹಿತತೆ ಇವುಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾನಾ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳು ಮಾತನಾಡಿ, ಸೈಬರ್ ಸೆಕ್ಯುರಿಟಿ, ಏರೋಸ್ಪೇಸ್, ರೋಬೋಟಿಕ್ಸ್, ಐಒಟಿ, ಅಗ್ರಿಟೆಕ್, ಫಿನ್ಟೆಕ್, ಮೆಡ್-ಟೆಕ್ ಮುಂತಾದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಸಹಭಾಗಿತ್ವ ಸ್ಥಾಪನೆಗೆ ಒಲವು ವ್ಯಕ್ತಪಡಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲೆಂದೇ ಕರ್ನಾಟಕವು 2017ರಲ್ಲೇ ಜಿಐಎ ಉಪಕ್ರಮ ಆರಂಭಿಸಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವ ರಾಷ್ಟ್ರಗಳೊಂದಿಗೆ ಬಹುಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಬೆಳ್ಳಿ ಪದಕ ಪಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ ಐವರು ವಿದ್ಯಾರ್ಥಿನಿಯರಿಗೆ ಸನ್ಮಾನ
ಭಾರತದಲ್ಲಿರುವ 100 ಯೂನಿಕಾರ್ನ್ ಕಂಪನಿಗಳ ಪೈಕಿ 39 ಬೆಂಗಳೂರಿನಲ್ಲೇ ಇವೆ. ನಾವೀನ್ಯತಾ ಸಹಭಾಗಿತ್ವಕ್ಕೆ ಬೇಕಾದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯ ಪರಿಸರವೂ ನಮ್ಮಲ್ಲಿದೆ ಎಂದು ನುಡಿದರು. ಕಳೆದ ವರ್ಷ(2021-22) ಭಾರತಕ್ಕೆ 83.57 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ. ಇದರಲ್ಲಿ ಶೇ.38ರಷ್ಟು ಹೂಡಿಕೆ ರಾಜ್ಯದಲ್ಲೇ ಆಗಿದೆ ಎಂದು ಹೇಳಿದರು.