ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ಹುಲಿಬೀರ. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ‘ಜಿಗ್ರಿ ದೋಸ್ತ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಯರ್ರಾಬಿರ್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಜಿಗ್ರಿ ದೋಸ್ತ ಹಾಡಿಗೆ ಮಾಳು, ಶಿವಾನಿ ದನಿಯಾಗಿದ್ದಾರೆ. ಉತ್ತರ ಕರ್ನಾಟಕದ ನೇಟಿವಿಟಿ, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ, ಹೀಗೆ ಅಲ್ಲಿನವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರಕ್ಕೆ ವೀರಸಮರ್ಥ ಅವರ ಸಂಗೀತ, ಸನಾತನ ಅವರ ಕ್ಯಾಮೆರಾ ವರ್ಕ್ ಇದೆ. ಹಿರಿಯ ನಟ ರಂಗಾಯಣ ರಘು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ.
ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ಈ ಕಾನ್ಸೆಪ್ಟ್ ಐದಾರು ವರ್ಷಗಳ ಹಿಂದೆಯೇ ಹುಟ್ಟಿದ್ದು. ಜುಲೈ 24ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಉದ್ದೇಶವಿದೆ. ಹಳ್ಳಿಯ ಮುಗ್ದ ಹುಡುಗನ ಕಥೆ. ನನ್ನ ಊರಲ್ಲಿ ನೋಡಿದ್ದು, ನಮ್ಮೆಲ್ಲರ ಜೀವನದಲ್ಲಿ ನಡೆವಂಥ ಘಟನೆಗಳೇ ಈ ಚಿತ್ರ. ಹಳ್ಳಿಯ ಹುಡುಗನೊಬ್ಬ ತನ್ನೂರನ್ನು ಉದ್ದಾರ ಮಾಡುವ ಕಥೆಯಿದು ಎಂದರು. ನಿರ್ಮಾಪಕ ದಾವಲ್ ಸಾಹೇಬ ಹುಣಶೀಮರದ ಮಾತನಾಡಿ, ನಮ್ಮ ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ. ವೇಲು ಅವರು ನಮಗೆ ತುಂಬಾ ಸಪೋರ್ಟ್ ಮಾಡಿದರು. ನಮ್ಮ ಚಿತ್ರ ಗೆದ್ದಷ್ಟೇ ಖುಷಿಯಾಗಿದೆ. ಉತ್ತರ ಕರ್ನಾಟಕದ ಸೊಗಡನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು. ಮತ್ತೊಬ್ಬ ನಿರ್ಮಾಪಕ ಅಶೋಕ್ (ತುರುವೇಕೆರೆ) ಮಾತನಾಡಿ, ಸಿನಿಮಾ ಈ ಮಟ್ಟಕ್ಕೆ ಬರಲು ಗಿರೀಶ್ ಕಾರಣ. ನಾನು ಉತ್ತರ ಕರ್ನಾಟಕದವನಲ್ಲ, ದಾವಲ್ ಸಾಹೇಬರು ಈ ಕಥೆ ಹೇಳಿ ಸಾಥ್ ಕೊಡಿ ಅಂದರು. ಇವತ್ತು ಹಾಡುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕಾಕ್ಟೇಲ್ 2ನಲ್ಲಿ ರಶ್ಮಿಕಾ ಮೂಲೆಗುಂಪು – ರೊಚ್ಚಿಗೆದ್ರು ಫ್ಯಾನ್ಸ್

ಸುಜಾತ ಗಿರೀಶ್ ಮಾತನಾಡಿ ನಾವು, ಉತ್ತರ ಕರ್ನಾಟಕದವರು, ಎಲ್ಲರೂ ನಮ್ಮಕಡೆ ಬರಬೇಕು. ಅಲ್ಲಿನ ಸೊಗಡನ್ನು ಸವಿಯಬೇಕು. ನಮ್ಮ ಚಿತ್ರ ಎಲ್ಲಾ ಭಾಷೆಗಳಲ್ಲಿ ಆಗಬೇಕು ಎಂಬಾಸೆ ಇದೆ ಎಂದರು. ಗಿರೀಶ್ ಮಾತನಾಡಿ, ನಮ್ಮ ಪತ್ನಿಗೆ ಸಿನಿಮಾ ಅಂದ್ರೆ ಬಹಳ ಪ್ರೀತಿ. ನೀನೇ ಮಾಡು ಅಂತ ಬೆನ್ನೆಲುಬಾಗಿ ನಿಂತೆ. ಸಂಗೀತಾ ಕಟ್ಟಿ ಅವರು ಅದ್ಭುತವಾದ ಹಾಡನ್ನು ಕೊಟ್ಟಿದ್ದಾರೆ ಎಂದರು. ನಾಯಕ ಅಂಜನ್ ಮಾತನಾಡಿ, ನಾನು ಕುಂದಗೋಳದವನು. ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ ಮುಂದೆ ನಿಂತು ಬಗೆಹರಿಸುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಪ್ರತಿ ಮನೆಯಲ್ಲಿ ಇಂಥ ಒಬ್ಬ ಹುಡುಗನಿರ್ತಾನೆ. ಲಾಸ್ಟ್ ಆಪ್ಷನ್ನಲ್ಲಿರೋ ಆ ಹುಡುಗ ಇಡೀ ಊರನ್ನೇ ಹೇಗೆ ಉದ್ದಾರ ಮಾಡ್ತಾನೆ ಅನ್ನೋದೇ ನನ್ನ ಪಾತ್ರ. ಹುಟ್ಟಿಬಂದೆ ಹುಲಿಬೀರ ಸಾಂಗ್ ನನಗೇ ಬರೆದ ಹಾಗಿತ್ತು.ಇದನ್ನೂ ಓದಿ: ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ನಲ್ಲಿ ಲವ್ ಮಾಕ್ಟೇಲ್ 3
ಒಂದಷ್ಟು ಜನರಿಗೆ ಸಿನಿಮಾ ತೋರಿಸಿದಾಗ ಕ್ಲೈಮ್ಯಾಕ್ಸ್ ನೋಡುವಾಗ ಎಲ್ಲರ ಕಣ್ಣಲ್ಲೂ ನೀರುಬಂತು. ನನ್ನ ತಾಯಿ ಪಾತ್ರವನ್ನು ಸುನಂದಮ್ಮ ಮಾಡಿದ್ದಾರೆ. ಮಲ್ಲು ಬಾಗಲಕೋಟೆ, ಮಾವನ ಪಾತ್ರ ಮಾಡಿದ್ದಾರೆ ಎಂದರು. ನಟಿ ವನು ಪಾಟೀಲ್ ಮಾತನಾಡಿ, ನಾನು ಯುಟ್ಯೂಬ್ ಮಾಡಿಕೊಂಡು ಬಂದಾಕಿ. ನನ್ನ ಮೊದಲ ಚಿತ್ರವಿದು. ಭಾಳ ಸ್ಪೆಷಲ್ ಕೂಡ. ಹಠಮಾರಿ ಹೆಣ್ಣಾಗಿ ರಗಡ್ ಪಾತ್ರ ಮಾಡಿದ್ದೇನೆ ಎಂದರು. ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ, ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.ಇದನ್ನೂ ಓದಿ: ದೇವಿ ಮಹಾತ್ಮೆ ಟೀಸರ್ನಲ್ಲಿ ರಂಗಾಯಣ ರಘು ಸಖತ್ ಮಿಂಚು
