ಉಡುಪಿ: ಪೇಜಾವರ ಶ್ರೀ(Pejavara Shree) ವಿಶ್ವ ಪ್ರಸನ್ನ ತೀರ್ಥರನ್ನು ಕಂಡರೆ ಭಕ್ತರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಉಡುಪಿಯ ನೀಲಾವರ ಗೋಶಾಲೆಯ ಆಡೊಂದು ತನ್ನೆರಡು ಕಾಲನ್ನು ಶ್ರೀಗಳ ಎದೆಗಿಟ್ಟು ಮೇವು ತಿಂದಿದೆ.
ಪೇಜಾವರ ಶ್ರೀಗಳಿಗೆ ಪ್ರಾಣಿಗಳು ಅಂದ್ರೆ ವಿಶೇಷ ಪ್ರೀತಿ. ಉಡುಪಿಯ ನೀಲಾವರ ಗೋಶಾಲೆಯಲ್ಲಿ ಸಾವಿರಾರು ದೇಶಿಯ ಗೋವುಗಳನ್ನು ಸಾಕಿ ಸಲ ಹುತ್ತಿರುವುದು ಇದಕ್ಕೆ ಸಾಕ್ಷಿ. ನೀಲಾವರ ಗೋಶಾಲೆಯಲ್ಲಿ, ಎರಡು ಆಡುಗಳನ್ನು ಸಾಕಲಾಗುತ್ತಿದೆ. ಮಠದ ಅಧೀನದ ಪೆಣರ್ಂಕಿಲ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಂದರ್ಭದಲ್ಲಿ ಕುಟುಂಬವೊಂದು ಅಜದಾನ ಕೊಟ್ಟಿತ್ತು. ಆ ಎರಡು ಆಡುಗಳನ್ನು ನೀಲಾವರ ಗೋಶಾಲೆಗೆ ತಂದು ಸಾಕಲಾಗುತ್ತಿದೆ.
ಪೇಜಾವರ ಶ್ರೀಗಳು ನೀಲಾವರ ಗೋಶಾಲೆಗೆ ಬಂದಾಗೆಲ್ಲ ಆ ಆಡುಗಳಿಗೆ(Goat) ಆಹಾರ ತಿನ್ನಿಸುತ್ತಾ ಅವುಗಳನ್ನು ಮುದ್ದು ಮಾಡುತ್ತಾರೆ. ಶ್ರೀಗಳು, ಇತ್ತೀಚೆಗೆ ನೀಲಾವರ ಗೋಶಾಲೆಗೆ ಬಂದಾಗ ಆಡಿಗೆ ಸೊಪ್ಪು ನೀಡಿದಾಗ ಆಡು ಪೇಜಾವರ ಶ್ರೀಗಳ ಎದೆ ಮೇಲೆ ತನ್ನ ಎರಡು ಕಾಲನ್ನಿಟ್ಟು, ಸೊಪ್ಪು ತಿಂದಿದೆ. ಸ್ಥಳದಲ್ಲೇ ಇದ್ದ ಭಕ್ತರೊಬ್ಬರು ತಮ್ಮ ಮೊಬೈಲ್ನಿಂದ ಇದನ್ನು ಸೆರೆ ಹಿಡಿದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದವರು ಶ್ರೀಗಳ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ತೆರವು: ಬೊಮ್ಮಾಯಿ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಗೋಶಾಲೆಯ ಎಲ್ಲ ಗೋವುಗಳು ಇಲ್ಲಿನ ದೇವಸ್ಥಾನ ಕಚೇರಿ ಸುತ್ತಮುತ್ತಲಿನ ಪರಿಸರದಲ್ಲಿ ಓಡಾಡಿಕೊಂಡಿರುತ್ತವೆ. ಎರಡು ಆಡುಗಳು ಕೂಡ ನಮ್ಮ ಮೇಲೆ ಬಹಳ ಪ್ರೀತಿ ತೋರುತ್ತವೆ. ಗೋವುಗಳು ಸೇರಿದಂತೆ ಎಲ್ಲಾ ಪ್ರಾಣಿಗಳು ತೋರುವ ಪ್ರೀತಿ ಅದು ನಿಷ್ಕಲ್ಮಶ ಎಂದು ಸ್ವಾಮೀಜಿ ಹೇಳಿದರು. ಇದನ್ನೂ ಓದಿ: BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು