ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಜೀವನದ ಪವಿತ್ರ ಪಯಣವನ್ನು ಭಕ್ತರು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಸುತ್ತಿರುವ ಈ ಕಥಾಹಂದರಕ್ಕೆ ಮನೆಮನೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ. ಈ ಹಿಂದೆ ರಾಯರ ಪಾತ್ರ ಮಾಡಿದ್ದ ಪರೀಕ್ಷಿತ್ ಇದೀಗ ಮತ್ತೊಮ್ಮೆ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಯರ ಈ ಕಥೆಯು ಶಂಕುಕರ್ಣನ ಜನ್ಮ ರಹಸ್ಯದಿಂದ ಹಿಡಿದು, ಪ್ರಹ್ಲಾದ, ಬಾಹ್ಲೀಕ ಮತ್ತು ವ್ಯಾಸರಾಯರ ಅವತಾರಗಳ ನಂತರ ನಾಲ್ಕನೇ ಜನ್ಮದಲ್ಲಿ ವೆಂಕಟನಾಥರಾಗಿ ಜನಿಸುವವರೆಗೆ ಅತಿ ಕುತೂಹಲಕಾರಿಯಾಗಿದೆ.

ರೈತರಿಗೆ ವಿತರಿಸಿದ್ದ ಹುಳು ಬಿದ್ದ ಭತ್ತದ ಮೂಟೆಯನ್ನು ರಾಯರು ತಮ್ಮ ಮಂತ್ರಾಕ್ಷತೆಯಿಂದ ಪರಿಶುದ್ಧಗೊಳಿಸಿದ ಪವಾಡವು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದೆ. ಇದರ ಜೊತೆಗೆ, ಸಂಸಾರ ಜೀವನದಲ್ಲಿದ್ದ ರಾಯರು ಸನ್ಯಾಸತ್ವದತ್ತ ಹೊರಳುವಾಗ ಅವರ ಪತ್ನಿ ಸರಸ್ವತಿಯವರು ಪಡುವ ಪಾಡು ಮನ ಮುಟ್ಟುವಂತಿದ್ದು ಕಥೆಯನ್ನು ಭಾವುಕತೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ತಂಜಾವೂರಿನಲ್ಲಿ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಗುರು ಸುಧೀಂದ್ರರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ‘ಶ್ರೀ ರಾಘವೇಂದ್ರ ತೀರ್ಥರು’ ಎಂದು ನಾಮಕರಣ ಮಾಡುವ ಐತಿಹಾಸಿಕ ಕ್ಷಣಗಳು, ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಭಕ್ತಿ ಮತ್ತು ವೈರಾಗ್ಯದ ಸಂಕೇತವಾಗಿರುವ ರಾಯರ ಪಾತ್ರದಲ್ಲಿ ನಟ ‘ಪರೀಕ್ಷಿತ್’ ಅವರು ಕಾಣಿಸಿಕೊಳ್ಳಲಿದ್ದಾರೆ.
ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ರಾಯರ ಜೀವನದ ಆದರ್ಶಗಳು ಧಾರಾವಾಹಿ ರೂಪದಲ್ಲಿ ಬರಲಿವೆ.
