ಬೆಂಗಳೂರು: ಆದಾಯ ತೆರಿಗೆ ಇಲಾಖೆ(ಐಟಿ) ದಾಳಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ತಮ್ಮ ಆಪ್ತ ಸಹಾಯಕ ರಮೇಶ್ ಜೊತೆಗಿನ ಕೊನೆಯ ಮಾತುಕತೆಯನ್ನು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಂಚಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಐಟಿ ಅಧಿಕಾರಿಗಳು ಪಂಚನಾಮೆ ಮುಗಿಸಿ ಮನೆಯಿಂದ ಹೊರಹೋದ ನಂತರ ಇಬ್ಬರನ್ನು ಕರೆದು ಧೈರ್ಯವಾಗಿರಿ. ಇದಕ್ಕೂ ನಿಮಗೂ ಸಂಬಂಧವಿಲ್ಲ. ಇಷ್ಟು ಸಮಯ ನೀವು ನಮಗೆ ಸಪೋರ್ಟ್ ಮಾಡಿದ್ದೀರಿ. ಅದಕ್ಕೆ ನಿಮಗೆ ಧನ್ಯವಾದಗಳು ಎಂದು ಹೇಳಿದೆ. ನಂತರ ಕೇಶವ ನಾನು ಮನೆಗೆ ಹೋಗುತ್ತೀನಿ ಎಂದು ಹೇಳಿದ. ನಾನು ಮನೆಗೆ ಹೋಗಿ ರೆಸ್ಟ್ ಮಾಡು ಎಂದು ಹೇಳಿ ಕಳುಹಿಸಿದೆ. ಇದೇ ವೇಳೆ ಅಲ್ಲೇ ಇದ್ದ ರಮೇಶ್ ಕೂಡ ನಾನು ಹೋಗುತ್ತೀನಿ ಅಂದರು. ಮತ್ತೆ ಅವರಿಗೂ ನಾನು ಧೈರ್ಯ ಹೇಳಿ ಕಳುಹಿಸಿದೆ. ಅದೇ ಅವರ ಜೊತೆ ನಾನು ಕೊನೆಯದಾಗಿ ಮಾತನಾಡಿದ್ದು ಎಂದು ಪರಮೇಶ್ವರ್ ರಮೇಶ್ ಜೊತೆಗೆ ನಡೆದ ಕೊನೆಯ ಮಾತುಕತೆಯನ್ನು ತಿಳಿಸಿದರು.
ರಮೇಶ್ ಅಗಲಿಕೆಯಿಂದ ಬಹಳ ನೋವಾಗುತ್ತಿದೆ. ರಮೇಶ್ ಗೂ ನನ್ನ ವ್ಯವಹಾರಕ್ಕೆ ಯಾವುದೇ ಸಂಬಂಧ ಇಲ್ಲ. ಅವರು ನನ್ನ ಪಿಎ ಆಗಿ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಐಟಿ ದಾಳಿಯಾದಾಗ ನಾನು ಬ್ಯುಸಿಯಿದ್ದೆ. ಮಧ್ಯಾಹ್ನ ಅಧಿಕಾರಿಗಳು ರಮೇಶ್ ಅವರನ್ನು ಕರೆದುಕೊಂಡು ಹೋಗುತ್ತೀವಿ ಎಂದು ಹೇಳಿದರು. ನಾನು ಆಗ ಆಯ್ತು ಕರೆದುಕೊಂಡು ಹೋಗಿ ಎಂದು ಹೇಳಿದೆ ಎಂದರು.
ಸಂಜೆ ಮತ್ತೆ ನಮ್ಮ ಮನೆಗೆ ಬಂದರು. ರಮೇಶ್ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಿದ್ದರು. ಅದು ಬಿಟ್ಟರೆ ಬೇರೆ ವಿಚಾರ ನನಗೆ ಗೊತ್ತಿಲ್ಲ. ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾಗಲಿ, ಅಲ್ಲಿ ಏನು ಪ್ರಶ್ನೆ ಮಾಡಿದರು ಎಂಬೂದು ನನಗೆ ಹೇಳಿಲ್ಲ. ನಮ್ಮ ಮನೆ ಮೇಲೆ ದಾಳಿಯಾದ ವೇಳೆ ಕೇಶವ ಮತ್ತು ರಮೇಶ್ ಎರಡು ದಿನ ನನ್ನ ಜೊತೆಗೆ ಇದ್ದರು. ಅವರನ್ನು ಹೊರ ಹೋಗಲು ಅಧಿಕಾರಿಗಳು ಬಿಡಲಿಲ್ಲ. ಎಲ್ಲ ಮುಗಿದು ಪಂಚನಾಮೆ ಹಾಕಿ ಅಧಿಕಾರಿಗಳು ಹೊರಗೆ ಹೋದರು. ನಾನು ರಮೇಶ್ಗೆ ಯಾವುದೇ ವ್ಯವಹಾರ ನೋಡಿಕೊಳ್ಳೋಕೆ ಬಿಟ್ಟಿರಲಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
https://www.youtube.com/watch?v=aWlXVjKpSfc