ಹುಬ್ಬಳ್ಳಿ: ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಮಾಡಬೇಕೆಂದು ಪೋಷಕರ ಮನವಿ ಮಾಡಿಕೊಂಡಿದ್ದರಿಂದ 59 ದಿನಗಳ ಹಿಂದೆ ಲಂಡನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿಯ ಲಿಂಗರಾಜ ನಗರದ ಎಂಜಿನಿಯರ್ ಶವ ಇಂದು ಬೆಂಗಳೂರಿಗೆ ಬರಲಿದೆ.
ಶಿವರಾಜ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಈ ವಿಷಯವನ್ನು ಕೇಂದ್ರ ಸಂಸದೀಯ ಸಚಿವ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಶನಿವಾರ ಖಚಿತಪಡಿಸಿದ್ದಾರೆ.
ಮಾರ್ಚ್ 13 ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಅಂತ್ಯ ಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರು. ಹೀಗಾಗಿ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು.
ಈ ಕುರಿತು ಶಿವರಾಜ ತಂದೆ, ತಾಯಿ 15 ದಿನಗಳ ಹಿಂದೆಯಷ್ಟೇ ತಮ್ಮ ಮಗನ ಶವವನ್ನು ದೇಶಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ನಿಟ್ಟಿನಲ್ಲಿ ನೆರವು ನೀಡಿದ್ದರು. ಭಾರತ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿ ಶವದ ಜೊತೆ ಪತ್ನಿ, ಮಗು ಬರಲು ಒಪ್ಪಿಗೆ ನೀಡಿದೆ.
ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ಮಟ್ಟಿನ ಲಾಕ್ಡೌನ್ ತೆರವುಗೊಂಡು ವಿಮಾನಯಾನ ಆರಂಭಗೊಂಡಿದೆ. ಇಂದು ಲಂಡನ್ನಿಂದ ಬೆಂಗಳೂರಿಗೆ ವಿಮಾನವೊಂದು ಬರುತ್ತಿದೆ. ಅದೇ ವಿಮಾನದಲ್ಲಿ ಟೆಕ್ಕಿ ಶಿವರಾಜ ಪಾಟೀಲ ಶವ ಹಾಗೂ ಪತ್ನಿ, ಮಗು ಬರುವ ಸಾಧ್ಯತೆ ಇದೆ ಎಂದು ಸಚಿವ ಜೋಶಿ ತಿಳಿಸಿದರು.