-ಮೈಸೂರಿನಲ್ಲಿಯೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ
-ಸಚಿವ ಸ್ಥಾನ ಆಕಾಂಕ್ಷಿ ಎಂ.ಬಿ.ಪಾಟೀಲ್ ಶಾಕ್ ಕೊಟ್ಟ ಮಾಜಿ ಸಿಎಂ
ಬಾಗಲಕೋಟೆ: ಚುನಾವಣೆಯ ವೇಳೆ ಮಾತ್ರ ಬಿಜೆಪಿಯವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ನೆನಪಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಶಿವನಗೌಡ ಉದಗೌಡ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದರು. ಇದೇ ವೇಳೆ ಶಿವನಗೌಡ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ರಾಮ ಮಂದಿರ ಸಮಸ್ಯೆ ಬಗೆಹರೆಯಬಾರದು. ಇದು ಜೀವಂತವಾಗಿರಬೇಕು ಎನ್ನುವುದು ಬಿಜೆಪಿಯವರ ಉದ್ದೇಶ. ಇದೊಂದು ರಾಜಕೀಯ ಹೈ ಡ್ರಾಮಾ. ಚುನಾವಣೆ ಆರಂಭಕ್ಕೂ ಮುನ್ನ ಬಿಜೆಪಿಯವರಿಗೆ ರಾಮ ನೆನಪಾಗುತ್ತಾನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರದ ಕೊನೆಯ ದಿನಗಳಲ್ಲಿ ರಾಮ ಮಂದಿರ ನಿರ್ಮಾಣದ ನೆಪ ಹೇಳುತ್ತಿದೆ ಎಂದು ಕಿಡಿಕಾರಿದರು.
ವಿಷ್ಣುವರ್ಧನ್ ಸ್ಮಾರಕ:
ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೆ ಚರ್ಚಿಸುತ್ತೇನೆ. ಇತ್ತ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗಲಿ ಎನ್ನುವ ನಿರ್ಧಾರ ಹೇಳಿಕೊಂಡಿದ್ದಾರೆ. ಈಗಾಗಲೇ ಮೈಸೂರು ಸಮೀಪ ಜಾಗ ಗುರುತಿಸಲಾಗಿತ್ತು, ಸದ್ಯ ಆ ವಿಚಾರ ಸದ್ಯ ಕೋರ್ಟ್ನಲ್ಲಿದೆ ಎಂದರು.
ಚಳಿಗಾಲದ ಅಧಿವೇಶನದ ವೇಳೆ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಗೊಡ್ಡು ಬೆದರಿಕೆಗೆ ಹೆದರವುದಿಲ್ಲ. ಅವರು ಒಂದು ಲಕ್ಷ ಜನ ಸೇರಿಸಿದರೆ ನಾವು ಎರಡು ಲಕ್ಷ ಮಂದಿ ಸೇರಿಸುತ್ತೇವೆ. ರೈತರು ಕೇವಲ ಬಿಜೆಪಿಯವರ ಪರವಾಗಿ ಅಷ್ಟೇ ಅಲ್ಲದೆ ನಮ್ಮ ಬೆಂಬಲಕ್ಕೂ ಇದ್ದಾರೆ. ರಾಜಕೀಯವಾಗಿ ಮಾತನಾಡುವ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದು ಟಾಂಗ್ ಕೊಟ್ಟರು.
ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಯಾವುದೇ ಶಾಸಕರು ಅಸಮಾಧಾನಗೊಂಡಿಲ್ಲ. ಅಲ್ಲದೇ ಸಂಪುಟ ಪುನಾರಚನೆಯಲ್ಲಿ ಬಾಗಲಕೋಟೆ ನಾಯಕರಿಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದ ಮಾಜಿ ಸಿಎಂ, ಮೈತ್ರಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ, ನಿಲ್ಲುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲೂಕುಗಳು ಬರಗಾಲ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಕೈಬಿಡುವ ತೀರ್ಮಾನವನ್ನು ತೆಗೆದುಕೊಂಡಿರಬಹುದು. ನಾನು ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷ ಬರವಿದ್ದ ಕಾರಣ ಹಂಪಿ ಉತ್ಸವ ಮಾಡಿರಲಿಲ್ಲ. ಚಾಲುಕ್ಯ ಉತ್ಸವದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನೇನು ಸರ್ಕಾರದಲ್ಲಿ ಇದ್ದೀನಾ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಸೆಲ್ಫಿ ಕ್ರೆಜ್:
ಬಾಗಲಕೋಟೆಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆದಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಮಲ್ಲಿಕಾ ಘಂಟಿ ಅವರ ಮಗನ ಮದುವೆಗೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅನೇಕ ಯುವಕ, ಯುವತಿಯರು ಮುಗಿಬಿದ್ದರು. ನಗುಮೊಗದಿಂದಲೇ ಸಿದ್ದರಾಮಯ್ಯ ಅವರು ಸೆಲ್ಫಿಗೆ ಪೋಸ್ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv