– ರಾಜೀನಾಮೆ ಬಿಸಾಕಿ ಬಂದೆ ಎಂದ ಯಡಿಯೂರಪ್ಪ
ಹಾವೇರಿ: ದೇಶದ ಅಲ್ಲಿ ಇಲ್ಲಿ ಯಂಕ-ನಾಣಿ-ಸೀನ ಅಂತ ಕೆಲವು ಕಾಂಗ್ರೆಸ್ ಎಂಪಿಗಳಿದ್ದಾರೆ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಲೆಳೆದಿದ್ದಾರೆ.
ಹಾನಗಲ್ ಉಪಚುನಾವಣೆಯ ಭರ್ಜರಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾವು ಮಾಡಿರುವ ಅಭಿವೃದ್ಧಿ ಹೇಳ್ಕೊಂಡು ಮತ ಕೇಳ್ತಿದ್ದೇವೆ. ಹಣ, ಹೆಂಡ, ಪ್ರಭಾವ ಬಳಸಿ ವೋಟು ಕೇಳುವ ಕಾಲ ಹೋಗಿದೆ. ಜನ ಈಗ ಬುದ್ಧಿವಂತರಾಗಿದ್ದಾರೆ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.
ಕಾಂಗ್ರೆಸ್ ನವ್ರ ಬುಡಬುಡಿಕೆ ಮಾತುಗಳಿಗೆ ಜನ ಬೆಲೆ ಕೊಡಲ್ಲ. ಕಾಂಗ್ರೆಸ್ ರಾಜಕೀಯ ದೊಂಬರಾಟ ಮಾಡಿ ಜನರ ಮನಸು ಗೆಲ್ಲಕ್ಕಾಗಲ್ಲ. ನಮ್ಮ ಪ್ರಚಾರದ ವೇಳೆ ಕಾಂಗ್ರೆಸ್ ನವರ ಹೆಸರು ಹೇಳುವ ಅಗತ್ಯ ಇಲ್ಲ. ಯಾಕಂದ್ರೆ ಜನ ಈಗ ಕಾಂಗ್ರೆಸ್ ನವ್ರನ್ನು ಮರೆತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್
ನಾನೇ ಸ್ವತ: ರಾಜೀನಾಮೆ ಕೊಟ್ಟೆ. ನನಗೆ ಯಾರೂ ಒತ್ತಾಯ ಮಾಡಲಿಲ್ಲ. ಅಧಿಕಾರ ಮುಖ್ಯ ಅಲ್ಲ ನನಗೆ. ಬೇರೆಯವರು ಸಿಎಂ ಆಗಬೇಕು ಅಂತ ರಾಜೀನಾಮೆ ಕೊಟ್ಟೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದೆ. ಇವತ್ತು ಬೊಮ್ಮಾಯಿ ಸಿಎಂ ಆಗಿದ್ದಾರೆ. ನನಗೆ ಅಧಿಕಾರ ಇಲ್ಲದಿದ್ರೂ ಜನ ಪ್ರೀತಿ, ಬೆಂಬಲ ತೋರಿಸ್ತಾರೆ. ನವೆಂಬರ್ 15 ರ ಬಳಿಕ ರಾಜ್ಯ ಪ್ರವಾಸ ಮಾಡ್ತೇನೆ. ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿಯುವಂತೆ ಮಾಡುವುದು ನನ್ನ ಸಂಕಲ್ಪ ಎಂದು ಹೇಳಿದರು.
ನಾವು ದೊಡ್ಡ ಅಂತರದಲ್ಲಿ ಗೆದ್ದಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕಿದೆ. ಚುನಾವಣೆ ಬಳಿಕ ವಿಜಯೋತ್ಸವ ಮಾಡೋಣ. 50-60 ಸಾವಿರ ಜನ ಸೇರಿಸಿ ವಿಜಯೋತ್ಸವ ಆಚರಿಸೋಣ ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ: ಹೆಚ್.ಡಿ ಕುಮಾರಸ್ವಾಮಿ