ಅಮರಾವತಿ: ಪಟಾಕಿ ಅಂಗಡಿಗಳಿಗೆ (Firecracker Shop) ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದಲ್ಲಿ ಭಾನುವಾರ ನಡೆದಿದೆ.
ನಗರದ ಗಾಂಧಿನಗರದ ಜಿಮಖಾನಾ ಮೈದಾನದಲ್ಲಿ ವ್ಯಾಪಾರಿಗಳು ಪಟಾಕಿ (Firecracker) ಅಂಗಡಿಗಳನ್ನು ಸ್ಥಾಪಿಸುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಸ್ಥಳದಲ್ಲಿದ್ದ 19 ಅಂಗಡಿಗಳ ಪೈಕಿ 3 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ. ಇನ್ನೊಂದು ಅಂಗಡಿ ಭಾಗಶಃ ಸುಟ್ಟು ಹೋಗಿದೆ. ಭಾರೀ ಸ್ಫೋಟ ಸಂಭವಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರು ವಿಜಯವಾಡದ ನಿವಾಸಿಗಳಾದ ಕಾಶಿ ಮತ್ತು ಸಾಂಬಾ ಎಂದು ಗುರುತಿಸಲಾಗಿದ್ದು, ಅವರು ಅದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಂಕಿ ಹೊತ್ತಿಕೊಂಡಾಗ ಅವರು ಮಲಗಿದ್ದರು ಎನ್ನಲಾಗಿದ್ದು, ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಇತರ 6 ಮಂದಿ ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಇದನ್ನೂ ಓದಿ: ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್ ಅಂದ ನೆಟ್ಟಿಗರು
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ. ಘಟನಾ ಸ್ಥಳಕ್ಕೆ ಶಾಸಕ ಮಲ್ಲಾಡಿ ವಿಷ್ಣು, ವಿಜಯವಾಡ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಬೆಂಕಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಬರುತ್ತಿದ್ದಂತೆ ಕೈಮುಗಿದು ಮಾತನಾಡಿಸಿದ ಶಾಸಕ ಪ್ರೀತಂಗೌಡ
ಭಾರೀ ಸ್ಫೋಟ ಉಂಟಾಗಿದ್ದರಿಂದ ಮೈದಾನದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿದೆ. ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ್ದಾರೆ. ಪೆಟ್ರೋಲ್ ಬಂಕ್ ಹತ್ತಿರ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.