– ಆಟಗಾರರನ್ನ ಶಿಕ್ಷಿಸಲು ಇಂತಹ ಕ್ರಮದ ಅಗತ್ಯವಿದೆ – ಕಮ್ರಾನ್ ಅಕ್ಮಲ್
ಇಸ್ಲಾಮಾಬಾದ್: ಸದ್ಯ ಕ್ರಿಕೆಟ್ ಲೋಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ (hreyas Iyer And Ishan Kishan) ಸುದ್ದಿಯಲ್ಲಿದ್ದಾರೆ. ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಗೇಟ್ಪಾಸ್ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಗುತ್ತಿಗೆ ಪಟ್ಟಿ ಪ್ರಕಟಿಸಿದ ನಂತರ ಬಿಸಿಸಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.
ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಬಿಸಿಸಿಐ ಬೆಂಬಲಿಸಿ ಮಾತನಾಡಿದ್ದಾರೆ. ಪಾಕಿಸ್ತಾನದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕ್ರಿಕೆಟ್ ಮಂಡಳಿ ಆದೇಶಗಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಆಟಗಾರರನ್ನು ಶಿಕ್ಷಿಸಲು ಇಂತಹ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್ಮ್ಯಾನ್ ನಾಯಕತ್ವಕ್ಕೆ ಮೆಚ್ಚುಗೆ
ಇಶಾನ್ ಕಿಶನ್ ಮತ್ತು ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಬಿಸಿಸಿಐ (BCCI) ಕೈಬಿಟ್ಟ ನಿರ್ಧಾರ ಸರಿಯಾಗಿದೆ. ಯಾವೊಬ್ಬ ಆಟಗಾರನೂ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಲು ಕಾರಣವಾದ ಆಟಕ್ಕೆ ಬೆಲೆ ಕೊಡದೇ ಇದ್ದರೆ, ಅದು ಇತರರಿಗೆ ಏನು ಸಂದೇಶ ನೀಡುತ್ತದೆ ಹೇಳಿ? ಮುಂದೆ ಆಗುವ ದೊಡ್ಡ ಹಾನಿಯನ್ನು ತಡೆಯಲು ಬಿಸಿಸಿಐ ಈಗಲೇ ಕ್ರಮ ತೆಗೆದುಕೊಂಡಿದ್ದು ಉತ್ತಮ. ಇಲ್ಲದಿದ್ದರೆ ಭವಿಷ್ಯದ ಆಟಗಾರರೂ ಈ ರೀತಿ ಮಾಡೋದಕ್ಕೆ ಹಿಂದೆ-ಮುಂದೆ ಯೋಚಿಸಲ್ಲ. ದೇಶಕ್ಕಾಗಿ ಆಡುವ ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.
ರಣಜಿಯಲ್ಲೂ ಅಯ್ಯರ್ ಫ್ಲಾಪ್ ಪ್ರದರ್ಶನ:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಸದ್ಯ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಕ್ವಾರ್ಟರ್ಫೈನಲ್ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಅಯ್ಯರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಯ್ಯರ್ ಕೇವಲ 8 ಎಸೆತಗಳಲ್ಲಿ 3 ರನ್ ಗಳಿಸಿ ಔಟಾಗಿದ್ದಾರೆ. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?
ಬಿಸಿಸಿಐ ಪರ ಕಪಿಲ್ ದೇವ್ ಬ್ಯಾಟಿಂಗ್:
ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕೂಡ ಕೇಂದ್ರಗುತ್ತಿಗೆ ವಿಚಾರದಲ್ಲಿ ಬಿಸಿಸಿಐ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೆಲೆಯೂರಿದ ನಂತರ ಆಟಗಾರರು ದೇಶಿ ಕ್ರಿಕೆಟ್ನಿಂದ ಹೊರಬರುತ್ತಿರುವುದು ನನಗೆ ಬೇಸರ ತಂದಿದೆ. ಕೆಲವು ಆಟಗಾರರು ನರಳಿದರೆ ನರಳಲಿ, ಆದರೆ ದೇಶಕ್ಕಿಂತ ಯಾವುದೂ ಮುಖ್ಯವಾಗಬಾರದು. ದೇಶಿ ಕ್ರಿಕೆಟ್ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಬಿಸಿಸಿಐನ ಈ ಹೆಜ್ಜೆ ಅಗತ್ಯ ಎಂದು ಬಣ್ಣಿಸಿದ್ದಾರೆ.
ಬಿಸಿಸಿಐ ಕಾಂಟ್ರ್ಯಾಕ್ಟ್ ಕಳೆದುಕೊಂಡ ಅಯ್ಯರ್-ಕಿಶನ್:
ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ಇಶಾನ್ ಕಿಶನ್ ರಣಜಿ ಟ್ರೋಫಿಯಿಂದ ಹೊರಗುಳಿದಿದ್ದಾರೆ ಮತ್ತು ಅವರ ತವರು ತಂಡ ಜಾರ್ಖಂಡ್ ಪರ ಆಡಲು ಮನಸು ಮಾಡಲಿಲ್ಲ. ರಣಜಿ ಟ್ರೋಫಿಯಲ್ಲಿ ಆಡುವ ಬದಲು ಇಶಾನ್, ಮಾರ್ಚ್ 22 ರಿಂದ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ ಆರಂಭಿಸಿದ್ದರು. ಇಶಾನ್ ಕಿಶನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಇಶಾನ್ ಕಿಶನ್ ಅವರ ಈ ಧೋರಣೆಯಿಂದಾಗಿ ಕೇಂದ್ರ ಒಪ್ಪಂದದಿಂದ ಅವರನ್ನು ಹೊರ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.