ಧಾರವಾಡ: ಸಂಸದ ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಧಮ್ಕಿ ಹಾಕಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಕನ್ನಡ ಹೋರಾಟಗಾರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೋ ಹಾಗೆ ಅವರ ಪರಿಸ್ಥಿತಿ ಆಗಿದೆ ಎಂದು ಕಿಡಿಕಾರಿದರು.
ಸಂಸದರಿಗೆ ನಾಚಿಕೆ, ಮಾಯ-ಮರ್ಯಾದೆ ಇದ್ದರೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಬೇಕು. ರವಿ ಸುಬ್ರಹ್ಮಣ್ಯ ಅವರಿಗೆ ಬಕೆಟ್ ಹಿಡಿದು ಸಂತೋಷ್ ಹತ್ತಿರ ಟಿಕೆಟ್ ತಗೊಂಡು ಎಂಪಿ ಆಗಿದ್ದಾರೆ ಎಂದು ಆರೋಪ ಮಾಡಿದರು. ಅವರು ಕನ್ನಡ ಹೋರಾಟಗಾರರ ಬಳಿ ಕ್ಷಮೆ ಕೇಳದೇ ಹೋದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ತಂದೆ ಸಮಾನ, ಮೊದಲಿನಿಂದಲೂ ಯಡಿಯೂರಪ್ಪ ಜೊತೆ ನನ್ನ ಸಂಬಂಧ ಚೆನ್ನಾಗಿದೆ. ಬಿಎಸ್ವೈ ಅವರಿಂದಲೇ ನನಗೆ ಒಳ್ಳೆಯ ಹೆಸರು ಬಂದಿದೆ. ಅವರು ಬಂದ ಮೇಲೆಯೇ ಕೆಜೆಪಿಗೆ ಒಳ್ಳೆದಾಗಿದೆ ಎಂದು ಹೇಳಿದರು. ಬಿಎಸ್ವೈ ಪಾಪ ಈಗ ತುಂಬಾ ಟೆನ್ಷನ್ ಮತ್ತು ಗೊಂದಲದಲ್ಲಿ ಇದ್ದಾರೆ. ಮೊದಲಿನಿಂದಲೂ ಅವರ ಮೇಲೆ ನನಗೆ ಸಾಫ್ಟ್ ಕಾರ್ನರ್ ಇದೆ ಎಂದು ತಿಳಿಸಿದರು.
ನನಗೆ ಅನ್ಯಾಯ ಆದಾಗ ಬಿಸ್ವೈ ವಿರುದ್ಧ ಮಾತಾಡಿದ್ದು ಬೈದಿದ್ದು ಉಂಟು. ಅಪ್ಪ ಕೆಟ್ಟದು ಮಾಡಿದಾಗ ನಾವೂ ಬೈತಿವಿ, ಯಡಿಯೂರಪ್ಪ ಅವರು ನಮ್ಮ ತಂದೆ ಸಮಾನರು. ಭ್ರಷ್ಟಾಚಾರ ಅಪ್ಪ-ಅಮ್ಮ ಯಾರೇ ಮಾಡಿದರೂ ತಪ್ಪೇ. ನನ್ನ ಪಕ್ಷಕ್ಕೆ ಅವರು ಬಂದ ಮೇಲೆ ನನಗೆ ಏನೆನೆಲ್ಲ ಮಾಡಿದರು ಆದರೂ ಸಹಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಕುಳಿತು ನೀಲಿ ಚಿತ್ರ ನೋಡಿದ ಸವದಿ ಒಳ್ಳೆಯವರಾ, ಬಿಜೆಪಿಗೆ ಬ್ಲೂಫಿಲ್ಮ್ ನೋಡುವವರೇ ಬೇಕಾಗಿದ್ದಾರೆ ಅಂದರೆ ಏನೂ ಮಾಡೋಕೆ ಆಗೋದಿಲ್ಲ, ಅವರಿಗೆ ಜನರ ಸೇವೆ ಮಾಡೋರು ಬೇಕಾಗಿಲ್ಲ ನೀಲಿ ಚಿತ್ರ ನೋಡುವವರು ತೋರಿಸುವವರು ಬೇಕಾಗಿದ್ದಾರೆ ಎಂದು ಪ್ರಸನ್ನ ಕಿಡಿಕಾರಿದರು.