ಮೈಸೂರು: ನಂಜುಂಡೇಶ್ವರನ (Nanjanagudu) ಮೂರ್ತಿಗೆ ಎಂಜಲು ನೀರು ಎರಚಿದ ಪ್ರಕಣ ಸಂಬಂಧ ಇಂದು ದೇವಾಲಯದ ಮುಂದೆ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.
ಶ್ರೀ ಕಂಠೇಶ್ವರ ಭಕ್ತ ಮಂಡಳಿ ವತಿಯಿಂದ ಪ್ರತಿಭಟನೆ ನಡೆದಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ.
ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ (Protest) ನಡೆಸಿದ್ದಾರೆ. ಈ ವೇಳೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪ ಕೂಡ ಮಾಡಿದ್ದಾರೆ.
ಇತ್ತ ಪ್ರಕರಣ ಸಂಬಂಧ ಮಾತನಾಡುತ್ತಾ ದೇಗುಲದ ಹಿರಿಯ ಅರ್ಚಕ ಶ್ರೀಕಂಠ ದೀಕ್ಷಿತ್ ಮಾತನಾಡುತ್ತಾ ಕಣ್ಣೀರು ಹಾಕಿದರು. ನಾನು 50 ವರ್ಷದಿಂದ ಅರ್ಚಕನಾಗಿದ್ದೇನೆ. ಈಗ ಕಿಡಿಗೇಡಿಗಳು ನೀರನ್ನು ಎರಚಿದ್ದಾರೆ. ನಾಳೆ ಇನ್ನೇನಾದರೂ ಆಗಬಹುದು. ಮುಂದೆ ಜಾತ್ರೆ ಉತ್ಸವಗಳಿದೆ. ಹೀಗಾಗಿ ದೇವಾಲಯಕ್ಕೆ ರಕ್ಷಣೆ ಕೊಡಿ ಎಂದು ಕಣ್ಣೀರಿಡುತ್ತಲೇ ಮನವಿ ಮಾಡಿಕೊಂಡರು.
ಏನಿದು ಪ್ರಕರಣ..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದರೂ, ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿದೆ.
ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿ ಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ಇಓ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿತ್ತು..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾಧಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಉಲ್ಲೇಖಿಸಿದ್ದರು.