ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ.
62 ಆಪ್ ಶಾಸಕರ ಪೈಕಿ 58 ಶಾಸಕರು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಪರವಾಗಿ ಮತ ಚಲಾಯಿಸಿದ್ದಾರೆ. 70 ಸದಸ್ಯರ ಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಎಎಪಿ 62, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಇದನ್ನೂ ಓದಿ: ನಾಗರಿಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ
ತಮ್ಮ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿಯ ‘ಆಪರೇಷನ್ ಕಮಲ’ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ನಂತರ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಪ್ರಸ್ತಾಪಿಸಿದ್ದರು, ಈ ವೇಳೆ ಎಲ್ಲ ಶಾಸಕರು ಕೇಜ್ರಿವಾಲ್ ಪರ ಮತ ಚಲಾಯಿಸಿದ್ದಾರೆ.
ವಿಶ್ವಾಸ ಮತಯಾಚನೆ ಬಳಿಕ ಮಾತನಾಡಿದ ಅವರು, ಬಿಜೆಪಿ ದೆಹಲಿಯಲ್ಲಿ ಒಬ್ಬ ಎಎಪಿ ಶಾಸಕರನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮಲ್ಲಿ 62 ಶಾಸಕರಿದ್ದಾರೆ. ಇಬ್ಬರು ದೇಶದಿಂದ ಹೊರಗಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ. ನಾಲ್ಕನೇ ಸದಸ್ಯರು ಸದನದ ಸ್ಪೀಕರ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ