ಬೆಂಗಳೂರು: ಒಂದೆಡೆ ದಟ್ಟ ಮಂಜಿನಿಂದ ಆವೃತ್ತವಾಗಿರುವ ಬೆಟ್ಟ. ಮತ್ತೊಂದೆಡೆ ಬೆಟ್ಟ ಹತ್ತುತ್ತಿರುವ ಪ್ರವಾಸಿಗರ ದಂಡು. ಈ ದೃಶ್ಯಗಳೆಲ್ಲ ಕಂಡುಬಂದದ್ದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆ ಬೆಟ್ಟದಲ್ಲಿ.
ಚುಮುಚುಮು ಚಳಿಯಲ್ಲಿ ದಟ್ಟವಾದ ಮಂಜಿನ ಪ್ರಕೃತಿ ಸೌಂದರ್ಯವನ್ನು ಸವಿಯಲು, ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಪುಣ್ಯ ಕ್ಷೇತ್ರ ಶಿವಗಂಗೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಮಳೆಗಾಲ ಮುಗಿದು ಈಗಾಗಲೇ ಚಳಿಗಾಲ ಕೂಡ ಅಂತ್ಯದಲ್ಲಿದೆ. ಆದರೆ ಪ್ರವಾಸಿಗರ ತಾಣ ಹಾಗೂ ಪುಣ್ಯ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಶಿವಗಂಗೆ ಬೆಟ್ಟದಲ್ಲಿ ದಟ್ಟ ಮಂಜು ಆವರಿಸುತ್ತಿದ್ದು ಚಾರಣಿಗರನ್ನ ಕೈಬೀಸಿ ಕರೆಯುತ್ತಿದೆ. ಪ್ರಕೃತಿ ಸೊಬಗನ್ನ ಸವಿಯಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಶಿವಗಂಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ದಟ್ಟ ಮಂಜಿನಲ್ಲಿ ಬೆಟ್ಟದ ಮೇಲೆ ಹತ್ತುತ್ತಿದ್ದರೆ ಮೋಡದ ಒಳಗೆ ಓಡಾಡಿದ ರೀತಿಯಲ್ಲಿ ಅನುಭವವಾಗುತ್ತದೆ. ಈ ರೀತಿಯ ಮಂಜಿನ ಅನುಭವ ಪಡೆಯಬೇಕೆಂದರೆ ಮಲೆನಾಡು ಅಥವಾ ಕರಾವಳಿ ಪ್ರದೇಶಕ್ಕೆ ಹೋಗಬೇಕಿತ್ತು. ಆದ್ರೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿಯೇ ಈ ಪ್ರಕೃತಿ ಸೊಬಗನ್ನು ಸವಿಯಲು ಅವಕಾಶ ಸಿಕ್ಕಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.
ಬಂಡೆಗಳು ತೇವಗೊಳ್ಳುವ ಹಿನ್ನೆಲೆಯಲ್ಲಿ ಕೆಲವರು ಸಂಪೂರ್ಣ ಬೆಟ್ಟ ಹತ್ತಲಾಗದೆ ಅರ್ಧಕ್ಕೆ ಕೆಳಗಿಯುತ್ತಾರೆ. ಈ ಪ್ರಕೃತಿಯ ವಿಸ್ಮಯ ನೋಡುಗರನ್ನ ಕೈ ಬೀಸಿ ಕರೆಯುತ್ತಿದೆ ಅಂತಾರೆ ಪ್ರವಾಸಿಗರು.