ನವದೆಹಲಿ: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಕೆ. ಕವಿತಾ (K Kavitha) ಮನವಿಯನ್ನು ತಿರಸ್ಕರಿಸಿದ್ದು, ನ್ಯಾಯಾಂಗ ಬಂಧನದ ಅವಧಿಯನ್ನು ಏಪ್ರಿಲ್ 23 ರವರೆಗೆ ವಿಸ್ತರಿಸಲಾಗಿದೆ.
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸೋಮವಾರ ರೋಸ್ ಅವೆನ್ಯೂ ಕೋರ್ಟ್ನಲ್ಲಿ (Rose Avenue Court) ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು ಈಗಾಗಲೇ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ನ್ಯಾ. ಕಾವೇರಿ ಬವೇಜಾ, ಅವರಿಗೆ ಮಧ್ಯಂತರ ಜಾಮೀನು ನೀಡಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದರು.
ಪತ್ರದ ಮೂಲಕ ಮನವಿ: ಕವಿತಾ ಅವರು ನಾಲ್ಕು ಪುಟಗಳ ಪತ್ರವನ್ನು ನೀಡಿದ್ದರು. ಪತ್ರದಲ್ಲಿ ಮದ್ಯ ಹಗರಣದಲ್ಲಿ ಭಾಗಿಯಾಗಿಲ್ಲ. ಅಲ್ಲದೇ ಹಗರಣದಿಂದ ನಾನು ಯಾವುದೇ ಪ್ರಯೋಜನಗಳನ್ನು ಪಡೆದಿಲ್ಲ. ಇಡಿ ಮತ್ತು ಸಿಬಿಐ ತನಿಖೆ ಮಾಧ್ಯಮ ವಿಚಾರಣೆಯಾಗಿದೆ ಎಂದು ದೂರಿದ್ದಾರೆ.
16 ವರ್ಷದ ಮಗನ ಪರೀಕ್ಷೆಯನ್ನು ಉಲ್ಲೇಖಿಸಿದ ಅವರು ಪರೀಕ್ಷೆಗೆ ತನ್ನ ಮಗನಿಗೆ ತಾಯಿಯ ನೈತಿಕ ಮತ್ತು ಭಾವನಾತ್ಮಕ ಬೆಂಬಲದ ಅಗತ್ಯವಿದೆ ಎಂದು ನ್ಯಾಯಾಲಯದ ಬಳಿ ಅವರು ಮನವಿ ಮಾಡಿದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ಗೆ ʻZ’ ಕೆಟಗರಿ ಭದ್ರತೆ
ದೆಹಲಿ ಮದ್ಯ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 15 ರಂದು ಹೈದರಾಬಾದ್ನ ಬಂಜಾರಾ ಹಿಲ್ಸ್ನಿಂದ ಇಡಿ ಕೆ ಕವಿತಾ ಅವರನ್ನು ಬಂಧಿಸಿದೆ. ಮಾರ್ಚ್ 23ರವರೆಗೆ ಇಡಿ ಕಸ್ಟಡಿಯಲ್ಲಿದ್ದರು. ಮಾರ್ಚ್ 26 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಅವರನ್ನು ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಅಂದಿನಿಂದ ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.